ಕರ್ನಾಟಕ ಕ್ರಿಕೆಟ್ ಕಂಡ ಶ್ರೇಷ್ಠರಲ್ಲಿ ಒಬ್ಬರಾದ ಬಿ.ವಿಜಯಕೃಷ್ಣ ತಮ್ಮ ಜೀವನದ ಇನ್ನಿಂಗ್ಸ್ ಮುಗಿಸಿದ್ದಾರೆ.71 ವರ್ಷ ವಯಸ್ಸಿನ ವಿಜಯಕೃಷ್ಣ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಅಪಾರ ಕ್ರಿಕೆಟ್ ಬಂಧುಗಳನ್ನ ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.ತಮ್ಮ ವಿಭಿನ್ನ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಾ ಎದುರಾಳಿಗಳನ್ನ ಕಂಗೆಡಿಸಿ ಪೆವಿಲಿಯನ್ ದಾರಿ ತೋರಿಸುತ್ತಿದ್ದ ಎಡಗೈ ಆರ್ಥೋಡಕ್ಸ್ ಬೌಲರ್ ವಿಜಯಕೃಷ್ಣ ತಮ್ಮ 71 ನೇ ವಯಸ್ಸಿಗೆ ಅಂತಿಮ ವಿದಾಯ ಹೇಳಿದ್ದಾರೆ.ಚೈನಾಮನ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ಪ್ರೀತಿಯ ವಿಜಿ( Nick Name) ಭಾರತ ತಂಡವನ್ನ ಪ್ರತಿನಿಧಿಸುವ ಅವಕಾಶದಿಂದ ವಂಚಿತರಾದರೂ ರಾಜ್ಯ ತಂಡದ ಸಾಧನೆಗಳ ಒಂದು ಭಾಗವಾಗಿ ತೃಪ್ತಿ ಕಂಡಿದ್ದಾರೆ. 80 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 194 ವಿಕೆಟ್ ಗಳನ್ನ ತಮ್ಮ ಬುಟ್ಟಿಗೆ ಹಾಕಿಕೊಂಡ ವಿಜಯಕೃಷ್ಣ ನೇರನುಡಿ ಸ್ವಭಾವದವರಾಗಿದ್ದರು.1968-69 ರ ಸಾಲಿನಲ್ಲಿ ರಣಜಿಗೆ ಎಂಟ್ರಿ ಕೊಟ್ಟ ವಿಜಯಕೃಷ್ಣ ಆಲ್ ರೌಂಡರ್ ಪ್ರದರ್ಶನ ನೀಡಿ ಕರ್ನಾಟಕ ತಂಡದ ಹಲವು ಗೆಲುವುಗಳ ರುವಾರಿಯಾಗಿ ಹೊರಹೊಮ್ಮಿದ್ದರು.ಎಡಗೈ ಬ್ಯಾಟ್ಸ್ ಮನ್ ಹಾಗೂ ಎಡಗೈ ಬೌಲರ್ ಆಗಿದ್ದ ವಿಜಯಕೃಷ್ಣ ರಾಜ್ಯ ಕ್ರಿಕೆಟ್ ಲೋಕದಲ್ಲಿ ಏಳುಬೀಳುಗಳನ್ನ ಕಂಡಿದ್ದರು.ವಿಜಯಕೃಷ್ಣ ರವರ ಕರಾರುವಾಕ್ ಬೌಲಿಂಗ್ ಭಾರತ ತಂಡಕ್ಕೆ ಅನಿವಾರ್ಯವಿದ್ದರೂ ಅಂದಿನ ದಿಗ್ಗಜರಾದ ಪ್ರಸನ್ನ,ಚಂದ್ರಶೇಖರ್,ವೆಂಕಟರಾಘವನ್,ಬಿಷನ್ ಸಿಂಗ್ ಬೇಡಿ ಹವಾ ಮಧ್ಯೆ ಎಲೆಮರೆಕಾಯಿ ಆದರು.ರಾಜ್ಯ ತಂಡಕ್ಕೆ ಮಾತ್ರ ಸೀಮಿತವಾದ ಇವರ ಸೇವೆ ಸಾಕಷ್ಟು ಗೆಲುವುಗಳಿಗೆ ಸಾಕ್ಷಿಯಾಯಿತು.80 ಪ್ರಥಮದರ್ಜೆ ಪಂದ್ಯಗಳಲ್ಲಿ 2297 ರನ್ ಗಳಿಸಿದ್ದ ವಿಜಯಕೃಷ್ಣ 2 ಶತಕ ಹಾಗೂ 16 ಅರ್ಧ ಶತಕ ಗಳಿಸಿ ರಾಜ್ಯ ತಂಡದ ಆಧಾರಸ್ಥಂಭವೂ ಆಗಿದ್ದರು.ಸಂಕಷ್ಟದಲ್ಲಿ ಸಿಲುಕುತ್ತಿದ್ದ ತಂಡಕ್ಕೆ ಆಸರೆಯಾಗುತ್ತಿದ್ದ ವಿಜಯಕೃಷ್ಣ ಅಂದಿನ ಮಿಸ್ಟರ್ ಡಿಪೆಂಡೆಬಲ್ ಆಗಿದ್ದರು.1973 ರಲ್ಲಿ ಮಹಾರಾಷ್ಟ್ರ ವಿರುದ್ದ ವೇಗವಾಗಿ ಗಳಿಸಿದ ಶತಕ ಸ್ಮರಿಸುವಂತದ್ದಾಗಿತ್ತು.1978 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಕ್ಲೈವ್ ಲಾಯಡ್ ನೇತೃತ್ವದ ವೆಸ್ಟ್ ಇಂಡೀಸ್ ಟೀಂ ರಣಜಿ ಟ್ರೋಫಿ ವಿಜೇತರಾಗಿದ್ದ ಕರ್ನಾಟಕದ ವಿರುದ್ದ ಅಭ್ಯಾಸ ಪಂದ್ಯ ಆಡಿತ್ತು.ಎರಡು ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಪಡೆದ ವಿಜಯಕೃಷ್ಣ ಕೆರಿಬಿಯನ್ನರ ಜಂಗಾಬಲ ಉಡುಗಿಸಿದ್ದರು.1983-84 ರಲ್ಲಿ ಗವಾಸ್ಕರ್,ಶ್ರೀಕಾಂತ್,ಕಪಿಲ್ ದೇವ್,ಮೊಹಿಂದರ್ ಅಮರನಾಥ್ ಒಳಗೊಂಡ ರೆಸ್ಟ್ ಆಫ್ ಇಂಡಿಯಾ ವಿರುದ್ದ ಆಡಿದ್ದ ಕರ್ನಾಟಕ ತಂಡದ ಗೆಲುವಿಗೆ ವಿಜಯಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದರು.ಮೂರು ಬಾರಿ ಕರ್ನಾಟಕ ತಂಡ ರಣಜಿ ಟ್ರೋಫಿಗೆ ಮುತ್ತಿಟ್ಟಾಗ ತಂಡಕ್ಕೆ ವಿಜಯಕೃಷ್ಣ ರವರ ಕೊಡುಗೆ ಮರೆಯುವಂತದ್ದಲ್ಲ.1968-69 ರಿಂದ 1983-84 ರವರೆಗೆ ರಾಜ್ಯ ತಂಡವನ್ನ ಪ್ರತಿನಿಧಿಸಿ ಕಿರಿಯರಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ ನಿವೃತ್ತಿ ಘೋಷಣೆ ಮಾಡಿದ ಕ್ರಿಕೆಟಿಗರ ಪ್ರೀತಿಯ ವಿಜಿ ಇನ್ನಿಲ್ಲ ಎನ್ನುವುದು ಬೇಸರದ ಸಂಗತಿ.ನೇರ ನುಡಿ ಗಳಿಗೆ ಹೆಸರಾದ ವಿಜಯಕೃಷ್ಣ ಕ್ರಿಕೆಟ್ ಲೋಕಕ್ಕೆ ಮಾತ್ರವಲ್ಲದೆ ತಮ್ಮ ಅರ್ಥಪೂರ್ಣ ಜೀವನಕ್ಕೂ ಗುಡ್ ಬೈ ಹೇಳಿದ್ದಾರೆ.ವಿಜಯಕೃಷ್ಣ ಅಗಲಿಕೆ ಕ್ರಿಕೆಟ್ ಪ್ರೇಮಿಗಳಿಗಂತೂ ಅಪಾರ ನೋವು ತಂದಿರುವುದಂತೂ ನಿಜ…
