ವಿಧಾನಪರಿಷತ್ ಚುನಾವಣೆ ಹಿನ್ನಲೆ ಮೈಸೂರು-ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಇಂದು ನಾಮಪತ್ರ ಸಲ್ಲಿಸಿದರು.
ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸ್ಪರ್ಧೆ ಮಾಡುತ್ತಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ವಾಟಾಳ್ ನಾಗರಾಜ್ ನಾನು ಪಕ್ಷಾಂತರಿಯಲ್ಲ.ನಾನು ಪಕ್ಷಾಂತರಿಯಾಗಿದ್ದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಾಗಿತ್ತು.ನನ್ನದೇ ಆದ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ.ನಾನು ರಿಯಲ್ ಎಸ್ಟೇಟ್ ಮಾಡಿಲ್ಲ.ಲೂಟಿ ಮಾಡಿಲ್ಲ, ಕಂಟ್ರಾಕ್ಟರ್ ಕೆಲಸ ಮಾಡಿಲ್ಲ.
ಗ್ರಾಮ ಪಂಚಾಯತಿ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಮಹದಾಸೆಯಿಂದ ಸ್ಪರ್ಧೆಗೆ ಮುಂದಾಗಿದ್ದೇನೆ.
ವಿಧಾನ ಪರಿಷತ್ ಎಂದರೆ ಚಿಂತಕರ ಚಾವಡಿಯಿದ್ದಂತೆ.
ಆದರೆ ಈಗಿನ ಚುನಾವಣೆಯನ್ನು ಗಮನಿಸಿದರೆ ಬೇಸರವಾಗುತ್ತದೆ.
ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿವೆ.ರಾಜಕೀಯ ಪಕ್ಷಗಳು ಇಡೀ ರಾಜ್ಯದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಇದು ಗೋಚರವಾಗುತ್ತಿದೆ.
ಇದು ಕಡ್ಲೆಪುರಿ ವ್ಯಾಪಾರವಲ್ಲ, ಮಸಾಲಾ ದೋಸೆ ತಿಂದಂತಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಂಕಿ ಬೀಳಬಾರದು.ಗ್ರಾಮ ಪಂಚಾಯತಿ ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಬೇಡಿ.
ನನಗೆ ಒಂದು ಮತ ನೀಡಿ ಬೆಂಬಲಿಸಿ.
ಒಂದೇ ಮತ ಹಾಕಬೇಡಿ.ಇಬ್ಬರು ಗೆಲ್ಲಬೇಕಿದೆ, ಒಂದು, ಎರಡು, ಮೂರು, ನಾಲ್ಕನೇ ಪ್ರಾಶಸ್ತ್ಯದ ಮತಗಳಿಗೂ ಮಹತ್ವವಿದೆ.ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
ನಾನು ಪ್ರಾಮಾಣಿಕನಾಗಿದ್ದೇನೆ, ಪ್ರಾಮಾಣಿಕ ಜವಾಬ್ದಾರಿಯಿಂದಲೇ ಸ್ಪರ್ಧೆಗಿಳಿದಿದ್ದೇನೆ.ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದರೂ ವಿಚಲಿತನಾಗಿಲ್ಲ.ಈ ಬಾರಿ ನನಗೆ ಗೆಲ್ಲುವ ವಿಶ್ವಾಸವಿದೆ.ಗೆಲ್ಲುವ ಭರವಸೆಯಿಂದಲೇ ಕಣಕ್ಕಿಳಿದಿದ್ದೇನೆ ಎಂದು
ನಾಮಪತ್ರ ಸಲ್ಲಿಸಿದ ಬಳಿಕ ವಾಟಾಳ್ ನಾಗರಾಜ್ ಹೇಳಿದ್ದಾರೆ…