ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ…
- MysoreTV10 Kannada Exclusive
- June 17, 2023
- No Comment
- 118

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ…

ಮೈಸೂರು,ಜೂನ್ 17,Tv10 ಕನ್ನಡ
ಅಧಿಕಾರಿಗಳು ಪಾರದರ್ಶಕವಾಗಿ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ರಾದ ಕೆ. ಎನ್. ಫಣೀಂದ್ರ ಅವರು ಕಿವಿಮಾತು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ 3 ಅಂಗಗಳು ತಮ್ಮ ಕಾರ್ಯಗಳನ್ನು ನ್ಯಾಯುತವಾಗಿ ಮಾಡಬೇಕು.ಶಾಸಕಾಂಗ ಕಾನೂನುಗಳನ್ನು ರಚಿಸಿದರೆ, ಆ ಕಾನೂನುಗಳನ್ನು ಕಾರ್ಯಾಂಗ ಜಾರಿಗೆ ತಂದು ಜನರಿಗೆ ತಲುಪಿಸುತ್ತದೆ. ಜನರಿಗೆ ನೀಡಿರುವ ಕಾನೂನು, ಹಕ್ಕುಗಳ ಉಲ್ಲಂಘನೆಗೆ ಅಧಾಗ ನ್ಯಾಯಾಂಗ ಇದನ್ನು ಸರಿಪಡಿಸುವ ಕಾರ್ಯ ಮಾಡುತ್ತದೆ. ಮಾಧ್ಯಮವು ಈ ಮೂರು ಅಂಗಗಳು ಮಾಡುವ ತಪ್ಪುಗಳನ್ನು ಗಮನಕ್ಕೆ ತಂದು ಸರಿಪಡಿಸುವ ಕಾರ್ಯಕ್ಕೆ ಸಹಕರಿಸುತ್ತದೆ.
ಎಲ್ಲೆಲ್ಲಿ ಕಾರ್ಯಾಂಗ, ಶಾಸಕಾಂಗ ತಪ್ಪು ದಾರಿ ಹಿಡಿದು ಕಾನೂನು ಉಲ್ಲಂಘನೆ ಮಾಡಿದರೆ, ಕರ್ತವ್ಯ ಲೋಪ ಎಸಗಿದರೆ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತದೆ. ಲೋಕಾಯುಕ್ತ ಸಂಸ್ಥೆ ಕರ್ತವ್ಯ ಲೋಪ ಪರಿಶೀಲಿಸಿ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.ಅಧಿಕಾರಿಗಳು ಆತ್ಮ ಸಾಕ್ಷಿಗೆ ಅನುಗುಣವಾಗಿಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ತಲುಪಬೇಕಾದ ಸವಲತ್ತುಗಳನ್ನು ನ್ಯಾಯಯುತವಾಗಿ ಸಕಾಲದಲ್ಲಿ ತಲುಪಿಸಬೇಕು.
ಲೋಕಾಯುಕ್ತಕ್ಕೆ ದೂರನ್ನು ನೀಡಬೇಕು ಎಂದೇ ಇಲ್ಲಾ, ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡ ತನಿಖೆ ನಡೆಸಲಾಗುವುದು. ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ಸಲ್ಲಿಸಿದರೆ ಸುಳ್ಳು ದೂರು ಸಲ್ಲಿಸುವವರನ್ನು 6 ತಿಂಗಳು ಜೈಲಿಗೆ ಕಳುಹಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸಿ, ಸಂಬಂದಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಉಪ ನಿಬಂಧಕರಾದ ಚನ್ನಕೇಶವ ರೆಡ್ಡಿ, ಅಪರ ನಿಬಂಧಕರಾದ ಶಿವಕುಮಾರ್ ಬಿ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್, ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್. ಪಿ. ಸುರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯಿತ್ರಿ, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಅವರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.