ಭಾರಿ ಮಳೆಗೆ ಕುಸಿದ ಮನೆ…ಪರಿಹಾರ ಮಂಜೂರಾತಿಯಲ್ಲಿ ತಾರತಮ್ಯ…ದಸರಾ ಪೈಲ್ವಾನ್ ಕುಟುಂಬ ಹೈರಾಣು…
- TV10 Kannada Exclusive
- November 3, 2023
- No Comment
- 136

ನಂಜನಗೂಡು,ನ3,Tv10 ಕನ್ನಡ
ಎರಡು ವರ್ಷಗಳ ಹಿಂದೆ ಬಿದ್ದ ಭಾರಿ ಮಳೆಗೆ ಕುಸಿದ ಬಿದ್ದ ಮನೆಗೆ ಇನ್ನೂ ಪರಿಹಾರ ಬಂದಿಲ್ಲ.ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸುಸ್ತಾಗಿರುವ ದಸರಾ ಪೈಲ್ವಾನ್ ಖ್ಯಾತಿ ಗಾಂಧಿ ಕುಟುಂಬ ಹೈರಾಣವಾಗಿದೆ.ಪರಿಹಾರ ನೀಡದಿದ್ದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ನಂಜನಗೂಡು ತಾಲೂಕು ಕಳಲೆ ಗ್ರಾಮದ ಪೈಲ್ವಾನ್ ಗಾಂಧಿ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.
2022 ರಲ್ಲಿ ಬಿದ್ದ ಭಾರಿ ಮಳೆ ಮತ್ತು ಬಿರುಗಾಳಿಗೆ ಪೈ.ಗಾಂಧಿ ಕುಟುಂಬ ವಾಸವಿದ್ದ ಮಣ್ಣಿನ ಮನೆ ಕುಸಿದಿದೆ.ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಂಭಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಶೇ.75 ರಷ್ಟು ಹಾನಿ ಆಗಿದೆ ಎಂದು ವರದಿ ನೀಡಿದ್ದಾರೆ.ವರದಿಯ ಆಧಾರದಂತೆ ಮನೆ ಪುನರ್ ನಿರ್ಮಾಣಕ್ಕೆ ಸರ್ಕಾರ 5 ಲಕ್ಷ ಮಂಜೂರು ಮಾಡಬೇಕು.ಆದರೆ ಮಂಜೂರಾಗಿರುವುದು ಕೇವಲ 1.20 ಲಕ್ಷ ಮಾತ್ರ. ಸರ್ಕಾರಿ ಸಿಬ್ಬಂದಿಗಳ ಕುಮ್ಮಕ್ಕಿನಿಂದ ಕ್ಯಾಟಗರಿ ಬದಲಾವಣೆ ಆಗಿದೆ.ಅರ್ಜಿಯನ್ನ ಪುನರ್ ಪರಿಶೀಲನೆ ಮಾಡಿ ಮನೆ ನಿರ್ಮಾಣಕ್ಕೆ ಹಣ ಮಂಜೂರು ಮಾಡುವಂತೆ ನಿರಂತರವಾಗಿ ಗಾಂಧಿ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಗಾಂಧಿ ಇದೀಗ ಪ್ರತಿಭಟನೆ ಹಾದಿ ಹಿಡಿಯಲು ಚಿಂತಿಸಿದ್ದಾರೆ. 25 ವರ್ಷಗಳ ಕಾಲ ರಾಜ್ಯ ಮಟ್ಟದಲ್ಲಿ ಹಾಗೂ ದಸರಾ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಕುಸ್ತಿ ಅಖಾಡದಲ್ಲಿ ಹೆಸರು ಗಳಿಸಿರುವ ಪೈ. ಗಾಂಧಿ ಇದೀಗ ಪರಿಪಾಟಲು ಅನುಭವಿಸುತ್ತಿದ್ದಾರೆ.ಇನ್ನಾದರೂ ಜನಪ್ರತಿನಿಧಿಗಳಾಗಲಿ ಅಥವಾ ಹಿರಿಯ ಅಧಿಕಾರಿಗಳಾಗಲಿ ಪೈ.ಗಾಂಧಿ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕಿದೆ…