ಮುಜರಾಯಿ ಇಲಾಖೆಗೆ ಸೇರ್ಪಡೆಯಾದ್ರೂ ಅಭಿವೃದ್ದಿ ಕಾಣದ ಮಾದಪ್ಪನ ದೇವಸ್ಥಾನ…ನೂರಾರು ವರ್ಷಗಳಿಂದ ಕಗ್ಗತ್ತಲಲ್ಲೇ ಇರುವ ಪುರಾತನ ದೇವಾಲಯ…
- TV10 Kannada Exclusive
- November 21, 2023
- No Comment
- 170

ನಂಜನಗೂಡು,ನ21,Tv10 ಕನ್ನಡ

ಅಭಿವೃದ್ದಿ ಕಾಣಲೆಂದು ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಜನಪ್ರತಿನಿಧಿಗಳು ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ಅಪಾರ ಸಂಖ್ಯೆ ಭಕ್ತರನ್ನ ಹೊಂದಿರುವ ಈ ದೇವಾಲಯಕ್ಕೆ ತಲೆಮಾರುಗಳಿಂದಲೂ ವಿದ್ಯುತ್ ಸಂಪರ್ಕ ದೊರೆತಿಲ್ಲ.ದೇವಾಲಯಕ್ಕೆ ಬಣ್ಣ ಹೊಡೆಯುವ ಭಾಗ್ಯವೇ ಸಿಕ್ಕಿಲ್ಲ.ವಿಗ್ರಹಗಳ ಪಾಡಂತೂ ಕೇಳುವರೇ ಇಲ್ಲ. ಇದು ಮೂರು ತಾಲೂಕುಗಳ ಅಂಚಿನಲ್ಲಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಾಲಯದ ದುಃಸ್ಥಿತಿ.
ನಂಜನಗೂಡು, ಗುಂಡ್ಲುಪೇಟೆ, ಸರಗೂರು, ಮೂರು ತಾಲೂಕುಗಳ ವ್ಯಾಪ್ತಿಯ ಸರಹದ್ದಿನಲ್ಲಿ ಮಾದಪ್ಪನ ದೇವಾಲಯ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ.ವರ್ಷಕ್ಕೆ ಅರ್ಧಕೋಟಿಗೂ ಹೆಚ್ಚು ಆದಾಯ ಗಳಿಸುವ ದೇವಾಲಯವೂ ಆಗಿದೆ.ಬ್ಯಾಂಕ್ ಖಾತೆಯಲ್ಲಿ ಒಂದು ಕೋಟಿಗೂ ಅಧಿಕವಾದ ಮೊತ್ತ ಜಮಾ ಆಗಿದೆ.ಇಷ್ಟೆಲ್ಲಾ ಇದ್ದರೂ ದೇವಸ್ಥಾನದ ಅಭಿವೃದ್ದಿ ಮರೀಚಿಕೆಯಾಗಿದೆ.
ಅಮಾವಾಸ್ಯೆ ಹುಣ್ಣಿಮೆ ಹಾಗೂ ಸೋಮವಾರ ಶುಕ್ರವಾರ ಬಂದರೆ ಇಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡು ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ.
ಹಲವು ವರ್ಷಗಳಿಂದ ಖಾಸಗಿ ಟ್ರಸ್ಟಿನ ಆಡಳಿತದಲ್ಲಿ ದೇವಸ್ಥಾನ ಇತ್ತು.ಅಭಿವೃದ್ದಿ ಕಾಣಲೆಂಬ ಕಾರಣಕ್ಕೆ ಸುತ್ತಮುತ್ತಲಿರುವ ನೂರಾರು ಹಳ್ಳಿಗಳ ಭಕ್ತರ ಒತ್ತಾಯದ ಮೇರೆಗೆ ಕಳೆದ ಒಂದು ವರ್ಷದ ಹಿಂದೆ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಯಿತು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಚಾಮರಾಜನಗರ ಜಿಲ್ಲೆಯ ಮಾದೇಶ್ವರ ಬೆಟ್ಟದಂತೆ ಅಭಿವೃದ್ಧಿಪಡಿಸುತ್ತಾರೆ ಎಂಬ ಆಶಯದಿಂದ ಮುಜರಾಯಿ ಇಲಾಖೆಗೆ ಸೇರಿಸಲಾಯಿತು. ದುರಂತವೆಂದರೆ ಒಂದು ವರ್ಷವಾದರೂ ದೇವಾಲಯದ ದುಃಸ್ಥಿತಿ ಬದಲಾಗಿಲ್ಲ.ಇನ್ನು 15 ದಿನಗಳಲ್ಲಿ ಪ್ರತಿ ವರ್ಷದಂತೆ ದೊಡ್ಡ ಜಾತ್ರೆ ನಡೆಯಲಿದೆ. ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಇಲ್ಲಿ ಯಾವುದೇ ರೀತಿಯ ಮಂಜಾಗ್ರತ ಕ್ರಮ ಕೈಗೊಂಡಿಲ್ಲ. ಜಾತ್ರಾ ಮಹೋತ್ಸವ ಕಾರ್ಯಕ್ಕೆ ಸಿದ್ಧತೆ ನಡೆಸಿಲ್ಲ. ದೇವಾಲಯದ ಮೇಲ್ಭಾಗದ ಗೋಪುರಗಳಲ್ಲಿ ದೇವರ ವಿಗ್ರಹಗಳ ಹಲವಾರು ಭಾಗಗಳು ಕಳಚಿ ಬಿದ್ದಿವೆ. ಸಾಕಷ್ಟು ವಿಗ್ರಹಗಳು ವಿಘ್ನವಾಗಿವೆ. ದೇವಾಲಯದ ದುಃಸ್ಥಿತಿಯನ್ನ ಸಾರಿ ಹೇಳುವ ವಿಗ್ರಹಗಳನ್ನ ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಚುನಾವಣೆ ಬಂದರೆ
ಮೂರು ತಾಲೂಕುಗಳ ಹಾಲಿ ಮತ್ತು ಮಾಜಿ ಶಾಸಕರುಗಳು ಈ ದೇವಾಲಯದಲ್ಲಿ ಮೊದಲ ಪೂಜೆ ಸಲ್ಲಿಸಿದ ನಂತರ ಪ್ರಚಾರ ಕೈಗೊಳ್ಳುತ್ತಾರೆ.ಇಷ್ಟೆಲ್ಲಾ ನಂಬಿಕೆ ಭಕ್ತಿ ಇರುವ ದೇವಾಲ ರಾತ್ರಿ ಆದರೆ ಕಗ್ಗತ್ತಿಲಿನಲ್ಲಿ ಮುಳುಗುತ್ತದೆ.ಇನ್ನಾದರೂ ಜಿಲ್ಲಾಧಿಕಾರಿಗಳು ಎಚ್ಚೆತ್ತು ಪ್ರಸಿದ್ಧ ಧಾರ್ಮಿಕ ತಾಣವಾಗಿರುವ ಬೇಲದ ಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯವನ್ನು ಅಭಿವೃದ್ಧಿಪಡಿಸಲು ಮುಂದಾಗ ಬೇಕಿದೆ.ಭಕ್ತರ ಭಾವನೆಗೆ ಸ್ಪಂದಿಸಬೇಕಿದೆ…