
ಮುಡಾದಲ್ಲಿ ಮತ್ತೊಂದು ಗೋಲ್ ಮಾಲ್…ಪೌತಿಖಾತೆಯಲ್ಲ ಭ್ರಹ್ಮಾಂಡ ಭ್ರಷ್ಟಾಚಾರ…ನಕಲಿ ವ್ಯಕ್ತಿಗಳಿಗೆ ಪೌತಿಖಾತೆ… ವ್ಯವಸ್ಥಾಪಕ ಸಸ್ಪೆಂಡ್…ಆಯುಕ್ತ ಎ.ಎನ್.ರಘುನಂದನ್ ಆದೇಶ…ಮರಣಹೊಂದಿದ ವ್ಯಕ್ತಿಯ ಆಸ್ತಿ ಕಬಳಿಸಿದ ವಂಚಕರ ಜೊತೆ ಕೈಜೋಡಿಸಿದ ಆರೋಪ ಸಾಬೀತಾದ ಹಿನ್ನಲೆ ಅಮಾನತು…
- CrimeTV10 Kannada Exclusive
- April 10, 2025
- No Comment
- 46



ಮುಡಾದಲ್ಲಿ ಮತ್ತೊಂದು ಗೋಲ್ ಮಾಲ್…ಪೌತಿಖಾತೆಯಲ್ಲ ಭ್ರಹ್ಮಾಂಡ ಭ್ರಷ್ಟಾಚಾರ…ನಕಲಿ ವ್ಯಕ್ತಿಗಳಿಗೆ ಪೌತಿಖಾತೆ… ವ್ಯವಸ್ಥಾಪಕ ಸಸ್ಪೆಂಡ್…ಆಯುಕ್ತ ಎ.ಎನ್.ರಘುನಂದನ್ ಆದೇಶ…ಮರಣಹೊಂದಿದ ವ್ಯಕ್ತಿಯ ಆಸ್ತಿ ಕಬಳಿಸಿದ ವಂಚಕರ ಜೊತೆ ಕೈಜೋಡಿಸಿದ ಆರೋಪ ಸಾಬೀತಾದ ಹಿನ್ನಲೆ ಅಮಾನತು…




ಮೈಸೂರು,ಏ10,Tv10 ಕನ್ನಡ

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಎಂಬ ಆರೋಪಗಳು ಸಾರ್ವಜನಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದೆ.ಭ್ರಷ್ಟಾಚಾರದ ಸರಮಾಲೆಗಳನ್ನ ಹೊತ್ತು ಇಡಿ,ಲೋಕಾಯುಕ್ತ ಕಂಗೆಣ್ಣಿಗೆ ಗುರಿಯಾಗಿ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾದ ಮುಡಾ ಇಷ್ಟೆಲ್ಲಾ ಹಗರಣಗಳನ್ನ ಮೈಮೇಲೆ ಎಳೆದುಕೊಂಡಿದ್ದರೂ ಬುದ್ದಿ ಕಲಿತಿಲ್ಕ.ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲವೆಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.ನೂರಾರು ಪ್ರಕರಣಗಳು ಬಯಲಿಗೆ ಬಂದು ಸರ್ಕಾರಕ್ಕೆ ಮುಜುಗರ ತಂದ ಮುಡಾ ಮತ್ತೊಂದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ.ಮರಣಹೊಂದಿದ ವ್ಯಕ್ತಿಯ ಹೆಸರಿನಲ್ಲಿದ್ದ ಮನೆಯನ್ನ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಲು ಭಾರಿ ಗೋಲ್ ಮಾಲ್ ನಡೆಸಿದ ಅಧಿಕಾರಿಗಳು ವಂಚಕರ ಜೊತೆ ಕೈ ಜೋಡಿಸಿದ್ದಾರೆ.ನಕಲಿ ದಾಖಲೆ ಸೃಷ್ಟಿಸಲು ವಂಚಕನ ಜೊತೆ ಕೈ ಜೋಡಿಸಿದ ಆರೋಪದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯವಸ್ಥಾಪಕ ಸೋಮಸುಂದ್ರು ರವರನ್ನ ಅಮಾನತು ಮಾಡಲಾಗಿದೆ.ಮುಡಾ ಆಯುಕ್ತರಾದ ಎ.ಎನ್.ರಘುನಂದನ್ ರವರು ಈ ಆದೇಶ ಹೊರಡಿಸಿದ್ದಾರೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ನೀಡಿದ ದೂರಿನ ಹಿನ್ನಲೆ ಪರಿಶೀಲನೆ ನಡೆಸಿದ ಕಾರ್ಯದರ್ಶಿ ಪ್ರಸನ್ನ ಕುಮಾರ್ ನೀಡಿದ ವರದಿ ಆಧಾರದ ಮೇಲೆ ಆಯುಕ್ತರು ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಕ್ರಮ ಕೈಗೊಂಡಿದ್ದಾರೆ.
ಗೋಕುಲಂ 3 ನೇ ಹಂತ ಬಡಾವಣೆಯ ಮಾದರಿ ಮನೆ ನಂ.867 ರ 30*40 ವಿಸ್ತೀರ್ಣದ ಸ್ವತ್ತು ಶ್ರೀಮತಿ ಲಿಲಿಯನ್ ಶಾರದಾ ಜೋಸೆಫ್ ರವರಿಗೆ 02-11-1982 ರಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾಗಿದ್ದು ಕರಾರು ಪತ್ರ ನೀಡಲಾಗಿದೆ.ಆದ್ರೆ ಹಕ್ಕು ಪತ್ರ ವಿತರಣೆ ಆಗಿರುವುದಿಲ್ಲ.ಲಿಲಿಯನ್ ಶಾರದಾ ಜೋಸೆಫ್ ರವರು 03-09-1983 ರಂದು ಮರಣ ಹೊಂದಿರುತ್ತಾರೆ.ಸದರಿ ಸ್ವತ್ತು 06-04-2025 ರವರೆಗೂ ಪ್ರಾಧಿಕಾರದಿಂದ ಯಾರಿಗೂ ವರ್ಗಾವಣೆ ಆಗಿರುವುದಿಲ್ಲ.26-03-2024 ರಂದು ಲಿಲಿಯನ್ ಶಾರದಾ ಜೋಸೆಫ್ ರವರ ಕ್ರಮಬದ್ದ ವಾರಸುದಾರರಲ್ಲದ ವ್ಯಕ್ತಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ಗೆ ಪೌತಿ ಖಾತೆ ಮಾಡಿಕೊಟ್ಟು ಭಾರಿ ಗೋಲ್ ಮಾಲ್ ನಡೆದಿದೆ.ಕ್ರಮಬದ್ದವಾಗಿ ವಂಶವೃಕ್ಷ ಪಡೆಯದೆ ನಕಲಿ ದಾಖಲೆ ಸೃಷ್ಟಿಸಿ ನಕಲಿ ವಾರಸುದಾರರಿಗೆ ಪೌತಿಖಾತೆ ಮಾಡಲಾಗಿದೆ.ಪೌತಿಖಾತೆ ಮಾಡಲು ಮನಸೋ ಇಚ್ಛೆ ಕಚೇರಿ ಟಿಪ್ಪಣಿಗಳನ್ನ ಸೃಷ್ಟಿಸಲಾಗಿದೆ.ಅಲ್ಲದೆ ಬಿಟ್ ಆಫ್ ಲ್ಯಾಂಡ್ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ.ಅಕ್ರಮವಾಗಿ ಪಡೆದ ಮನೆಗೆ ನೆವಿಲ್ ಮಾರ್ಕಸ್ ಜೋಸೆಫ್ ರವರು ಈಗಾಗಲೇ ವಲಯ ಕಚೇರಿ 4 ರಲ್ಲಿ ಖಾತೆ ಮಾಡಿಸಿಕೊಂಡು ಮಮತ ಹಾಗೂ ಶ್ಯಾಂ ಎಂಬುವರಿಗೆ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಿರುತ್ತಾರೆ.
ಈ ಅಕ್ರಮದ ಬಗ್ಗೆ ಬಿ.ಎನ್.ನಾಗೇಂದ್ರ ರವರು ಲೋಕಾಯುಕ್ತ ಹಾಗೂ ಮುಡಾ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.ದಾಖಲೆಗಖನ್ನ ಪರಿಶೀಲಿಸಿದಾಗ ವ್ಯವಸ್ಥಾಪಕ ಸೋಮಸುಂದ್ರು ಹಾಗೂ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರು ಸದರಿ ನಿವೇಶನಕ್ಕೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ.ತಪ್ಪು ಎಸಗಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಮುಡಾ ಕಾರ್ಯದರ್ಶಿಗಳಾದ ಪ್ರಸನ್ನಕುಮಾರ್ ರವರು ಆಯುಕ್ತರಿಗೆ ನೀಡಿರುವ ವರದಿ ಆಧಾರದ ಮೇಲೆ ಸೋಮಸುಂದ್ರು ರವರನ್ನ ಅಮಾನತುಗೊಳಿಸಲಾಗಿದೆ.ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.