
ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…
- TV10 Kannada Exclusive
- June 23, 2025
- No Comment
- 22







ನಂಜನಗೂಡು,ಜೂ23,Tv10 ಕನ್ನಡ
ಶಿಥಿಲಗೊಂಡ ದೇವಾಲಯದ ಕಟ್ಟಡ,ಗೋಪುರಗಳ ಮೇಲೆ ಬೆಳೆದು ನಿಂತ ಸಸ್ಯಗಳು,ಬಿರುಕು ಬಿಟ್ಟ ಕಟ್ಟಡ,ಭಿನ್ನವಾಗಿರುವ ದೇವರ ಮೂರ್ತಿಗಳು,ಮುರಿದು ಮೂಲೆ ಸೇರಿರುವ ರಥದ ಚಕ್ರಗಳು,ಮಣ್ಣು ಹಿಡಿದ ರಥ ಎಳೆಯವ ಹಗ್ಗಗಳು,ಭಕ್ತರಿಗೆ ರೋಗರುಜಿನ ಹರಡಲು ಸಜ್ಜಾಗಿರುವ ಕಸದ ರಾಶಿ ಹೀಗೆ ಒಂದಲ್ಲ ಹತ್ತಾರು ಸಮಸ್ಯೆಗಳನ್ನ ಹೊತ್ತು ನಿಂತಿದೆ ನಂಜನಗೂಡು ತಾಲೂಕಿನಲ್ಲಿರುವ ಕಳಲೆ ಗ್ರಾಮದ ಲಕ್ಷ್ಮಿಕಾಂತಸ್ವಾಮಿ ದೇವಾಲಯ

ಶತಮಾನಗಳ ಇತಿಹಾಸವಿರುವ ದೇವಾಲಯ ಅಭಿವೃದ್ದಿಯನ್ನೇ ಕಂಡಿಲ್ಲ.ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಡಳಿತದ ಉಸ್ತುವಾರಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದ ಆಡಳಿತ ಮಂಡಳಿಗೆ ಸೇರಿದೆ.ನಂಜನಗೂಡು ದೇವಾಲಯಕ್ಕೆ ಪ್ರತಿತಿಂಗಳು ಕೋಟಿ ರೂಪಾಯಿ ಆದಾಯವಿದೆ.ಹೀಗಿದ್ದರೂ ಲಕ್ಷ್ಮಿಕಾಂತಸ್ವಾಮಿ ದೇವಾಲಯದ ಅಭಿವೃದ್ದಿ ಶೂನ್ಯ.ಈ
ದೇವಾಲಯಕ್ಕೆ ಬಣ್ಣ ಹೊಡೆದು ದಶಕಗಳೇ ಉರುಳಿ ಹೋಗಿದೆ.ಸ್ವಚ್ಛತೆ ಮರೀಚಿಕೆಯಾಗಿದೆ.ಈ ದೇವಾಲಯಕ್ಕೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲೇ ಬರುತ್ತಾರೆ.ಹುಂಡಿಗೆ ಸಾಕಷ್ಟು ಹಣವೂ ಸೇರುತ್ತದೆ.ಆದ್ರೆ ಅಭಿವೃದ್ದಿ ಮಾತ್ರ ಕಂಡಿಲ್ಲ.

ಗಂಗಾ ಹೊಯ್ಸಳರ ಕಾಲದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಪುರಾತತ್ವ ಇಲಾಖೆ ಹೇಳುತ್ತದೆ.ಪ್ರತಿ ವರ್ಷ ದಸರಾ ವೇಳೆ ಈ ದೇವಾಲಯದಿಂದ ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ವೇಳೆ ತೀರ್ಥ ಪ್ರಸಾದ ತಲುಪುತ್ತದೆ.ಶತಮಾನಗಳ ಇತಿಹಾಸವಿರುವ ಈ ದೇವಾಲಯಕ್ಕೆ ಕಾಯಕಲ್ಪದ
ಅಗತ್ಯವಿದೆ.ದೇವಾಲಯ ದಿನೇ ದಿನೇ ಅಳಿವಿನ ಅಂಚಿಗೆ ತಲುಪುತ್ತಿದ್ದರೂ ಮುಜರಾಯಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಅವಸಾನದ ಅಂಚಿಗೆ ತಲುಪಿ ಭಕ್ತರಿಂದ ಕಡೆಗಣಿಸುವ ಮುನ್ನ ದೇವಾಲಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಮುಂದಾಗಲಿ…
