ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್ಐಆರ್ ದಾಖಲು
- CrimeTV10 Kannada Exclusive
- August 4, 2026
- No Comment
- 16
ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್ಐಆರ್ ದಾಖಲು
ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಹಾಗೂ ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರಿದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರ ಸ್ಟೀಫನ್ ಸುಜಿತ್ ಜೆ. ಅವರು ನೀಡಿರುವ ದೂರಿನ ಪ್ರಕಾರ, ಶಾರದಾದೇವಿನಗರದ 2ನೇ ಮುಖ್ಯರಸ್ತೆ ಕೊನೆಯಲ್ಲಿರುವ ಉದ್ಯಾನವನದ (ಪಾರ್ಕ್) ಅತಿಕ್ರಮಣ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಿ.ಎಂ. ರಘು ಅವರು ಹಲವು ಬಾರಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 26ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಬೆದರಿಕೆ ಹಾಕಿದ್ದು, ಜುಲೈ 27ರಂದು ಮನೆಗೆ ಬಂದು ಗದ್ದಲ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಜುಲೈ 28ರಂದು ಪುತ್ರಿಯನ್ನು ಬ್ಯಾಡ್ಮಿಂಟನ್ ಅಕಾಡೆಮಿಗೆ ಬಿಡಲು ತೆರಳಿದ್ದಾಗ ಮತ್ತೊಮ್ಮೆ ಕಾರಿಗೆ ಕೂರಿಸಿಕೊಂಡು ಹೋಗಿ, ಪ್ರಕರಣ ಹಿಂಪಡೆಯದಿದ್ದರೆ ಕುಟುಂಬದ ಮೇಲೆ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಇದೇ ವೇಳೆ ಜುಲೈ 31ರಂದು ರಾತ್ರಿ ಕ್ರೈಸ್ಟ್ ಪಬ್ಲಿಕ್ ಶಾಲೆ ಎದುರು ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಅಡ್ಡಗಟ್ಟಿ ನಿಂದಿಸಿ ಹಲ್ಲೆ ನಡೆಸಿದ್ದು, ಮೂಗು ಹಾಗೂ ಬಾಯಿಗೆ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಎಂಎಲ್ಸಿ (MLC) ದಾಖಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.