ಟಿಂಬರ್ ಮರ್ಚೆಂಟ್ ಮನೆಗೆ ಕನ್ನ…47 ಲಕ್ಷ ನಗದು…100 ಗ್ರಾಂ ಚಿನ್ನ ಕಳುವು…ವಾಚ್ ಮನ್ ಇದ್ದರೂ ಕಳ್ಳರ ಕೈಚಳಕ…
- CrimeMysore
- June 12, 2023
- No Comment
- 104
ಮೈಸೂರು,ಜೂ12,Tv10 ಕನ್ನಡ
ಟಿಂಬರ್ ಮರ್ಚೆಂಟ್ ಮಾಲೀಕರ ಮನೆಯಲ್ಲಿ 47 ಲಕ್ಷ ನಗದು 100 ಗ್ರಾಂ ಚಿನ್ನಾಭರಣ ಕಳುವು ಮಾಡಿದ ಘಟನೆ ಮೈಸೂರಿನ ದೇವನೂರು ಬಡಾವಣೆಯಲ್ಲಿ ನಡೆದಿದೆ.ಮೊಮ್ಮೊಗಳ ಮದುವೆಗಾಗಿ ಬೆಂಗಳೂರಿಗೆ ಇಡೀ ಕುಟುಂಬ ತೆರಳಿದ್ದ ವೇಳೆ ಹೊಂಚು ಹಾಕಿದ ಕಳ್ಳರು ಲೀಲಾಜಾಲವಾಗಿ ಕೃತ್ಯವೆಸಗಿದ್ದಾರೆ.ವಾಚ್ ಮನ್ ಇದ್ದರೂ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.ಸಿಸಿ ಕ್ಯಾಮರಾ ಸ್ವಿಚ್ ಆಫ್ ಮಾಡಿರುವ ಖದೀಮರು ಕೃತ್ಯವೆಸಗಿದ್ದಾರೆ.
ಸೈಯದ್ ಮುಕ್ತಾರ್ ಅಹಮದ್ ರವರಿಗೆ ಸೇರಿದ ಮನೆಯಲ್ಲಿ ಕೃತ್ಯ ನಡೆದಿದೆ.ಜೂನ್ 7 ರಂದು ಮುಕ್ತಾರ್ ರವರ ಮೊದಲ ಮಗಳ ಮಗಳು(ಮೊಮ್ಮೊಗಳು) ಮದುವೆಗಾಗಿ ಇಡೀ ಕುಟುಂಬ ಬೆಂಗಳೂರಿಗೆ ತೆರಳಿದೆ.ಮೂರಂತಸ್ತಿನ ಮನೆಯ ಮೊದಲ ಅಂತಸ್ತಿನಲ್ಲಿರುವ ಮುಕ್ತಾರ್ ಕೊಠಡಿಯ ಬೀರುವಿನಲ್ಲಿ ಹಣ ಹಾಗೂ ಒಡವೆಗಳನ್ನ ಇಡಲಾಗಿತ್ತು.ವಾಚ್ ಮನ್ ಗೆ ಮನೆ ಜವಾಬ್ದಾರಿ ಬಿಟ್ಟು ಮುಕ್ತಾರ್ ಮೊಮ್ಮಗಳ ಮದುವೆಗೆ ತೆರಳಿದ್ದರು.ಶನಿವಾರ ರಾತ್ರಿ ಪಕ್ಕದ ಮನೆಯವರು ಮುಕ್ತಾರ್ ರವರಿಗೆ ಫೋನ್ ಮಾಡಿ ನಿಮ್ಮ ಮನೆ ಮೊದಲ ಮಹಡಿ ಬಾಗಿಲು ತೆರೆದುಕೊಂಡಿದ್ದು ಗಾಳಿಗೆ ಹಾರಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.ಕೂಡಲೇ ಮೈಸೂರಿಗೆ ಧಾವಿಸಿ ಪರಿಶೀಲನೆ ನಡೆಸಿದಾಗ ಬೀರುವಿನಲ್ಲಿದ್ದ 47 ಲಕ್ಷ ನಗದು,4 ಲಕ್ಷ ಮೌಲ್ಯದ 100 ಗ್ರಾಂ ಒಡವೆ ಹಾಗೂ 4 ಸಾವಿರ ಮೌಲ್ಯದ ಒಂದು ಟೈಟಾನ್ ವಾಚ್ ಕಳುವಾಗಿರುವುದು ಬೆಳಕಿಗೆ ಬಂದಿದೆ.ಖದೀಮರು ಸಿಸಿ ಕ್ಯಾಮರಾ ಸ್ವಿಚ್ ಆಫ್ ಮಾಡಿದ್ದಾರೆಂದು ಹೇಳಲಾಗಿದೆ.ವಾಚ್ ಮನ್ ಇದ್ದರೂ ಕೃತ್ಯ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಬೆರಳಚ್ಚು ತಜ್ಞರು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಖದೀಮರ ಸೆರೆಗೆ ಜಾಲ ಬೀಸಿದ್ದಾರೆ…