ಮುಡಾದಲ್ಲಿ 50-50 ಅನುಪಾತದಲ್ಲಿ ಭಾರಿ ಗೋಲ್ ಮಾಲ್… ಅಕ್ರಮ ಆಸ್ತಿ ಹಂಚಿಕೆ ಆರೋಪ…ಸರ್ಕಾರದ ಅಧೀನ ಕಾರ್ಯದರ್ಶಿ ಯಿಂದ ಜಿಲ್ಲಾಧಿಕಾರಿಗೆ ನಿರ್ದೇಶನ…ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಖಡಕ್ ಆದೇಶ…
- TV10 Kannada Exclusive
- November 9, 2023
- No Comment
- 621



ಮೈಸೂರು,ನ9,Tv10 ಕನ್ನಡ



ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಿಯಮಬಾಹಿರವಾಗಿ ಭೂಮಾಲೀಕರಿಗೆ ಪರಿಹಾರ ನೀಡದೆ ಬದಲಾಗಿ ಅಭಿವೃದ್ದಿ ಹೊಂದಿದ ಸ್ಥಳಗಳಲ್ಲಿ 50-50 ಅನುಪಾತದಡಿಯಲ್ಲಿ ಆಸ್ತಿ ಹಂಚಿಕೆ ಮಾಡಿ ಅಕ್ರಮ ಲಾಭ ಮಾಡಿಕೊಳ್ಳುತ್ತಿರುವುದಾಗಿ ಮುಡಾದ ಮಾಜಿ ಅಧ್ಯಕ್ಷರು,ಹಿಂದಿನ ಆಯುಕ್ತರು,ಹಾಲಿ ಆಯುಕ್ತರು,ವಿಶೇಷ ಭೂಸ್ವಾಧೀನಾಧಿಕಾರಿಗಳು,ವಿಶೇಷ ತಹಸೀಲ್ದಾರ್ ಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಟರಾಜ್ ಎಂಬುವರು ದೂರು ನೀಡಿದ್ದರು.ಈ ಕುರಿತಂತೆ ನಿಯಮಾನುಸಾರ ದಾಖಲೆಗಳನ್ನ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.ಆದರೆ ಇದುವರೆಗೆ ಸರ್ಕಾರಕ್ಕೆ ಯಾವುದೇ ವರದಿ ಸ್ವೀಕೃತವಾಗಿಲ್ಲ.ಜಿಲ್ಲಾಧಿಕಾರಿಗಳಿಗೆ ಪತ್ರ ಸಂಖ್ಯೆ ನ.ಆ.ಇ.109 ಮೈ.ಆ.ಪ್ರಾ.2023 ದಿನಾಂಕ 18-3-2023 ರಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆಯುವ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಹಾಗೂ ಸೂಕ್ತ ಸಲಹೆ ಮತ್ತು ಸೂಚನೆ ಹಾಗೂ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿತ್ತು.ಅದರಂತೆ ಪ್ರಾಧಿಕಾರದ ಸಭೆಗಳಲ್ಲಿ ಹಾಜರಾಗಿರುವ ಬಗ್ಗೆ ಮಾಹಿತಿ ಇರುವುದಿಲ್ಲ.ಆದ್ದರಿಂದ ಮೇಲ್ಕಂಡ ಎಲ್ಲಾ ದೂರು ಅರ್ಜಿಗಳಲ್ಲಿನ ಪ್ರತಿಯೊಂದು ಆರೋಪಗಳ ಕುರಿತು ಹಾಗೂ ಮುಡಾದಲ್ಲಿ ನಿಯಮಗಳನ್ನ ಉಲ್ಲಂಘಿಸಿ ನಿವೇಶನಗಳನ್ನ ಮಂಜೂರು ಮಾಡಿ ಕ್ರಯಪತ್ರ ಮಾಡಿಕೊಡುತ್ತಿರುವ ಬಗ್ಗೆ ಹಾಗೂ ಮೈಸೂರು ಹಿನಕಲ್ ಸ.ನಂ.293 ಹಾಗೂ 292 ರ ಅಕ್ರಮ ಖಾತೆ ಮಾಡಿಕೊಟ್ಟಿರುವ ಬಗ್ಗೆ ಉಲ್ಲೇಖಿಸಿ ನಿಯಮಾನುಸಾರ ಪರಿಶೀಲಿಸಿ ಸ್ಪಷ್ಠ ಅಭಿಪ್ರಾಯದೊಂದಿಗೆ ಸೂಕ್ತ ವರದಿಯನ್ನ ತುರ್ತಾಗಿ ಸಲ್ಲಿಸುವಂತೆ ಕೋರಲಾಗಿದ್ದು , ತಪ್ಪಿದ್ದಲ್ಲಿ ಮೇಲಿನ ದೂರುಗಳ ಕುರಿತು ಸೂಕ್ತ ಕ್ರಮ ವಹಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂಬ ಬಗ್ಗೆ ವರದಿ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಸರ್ಕಾರ ಅಧೀನ ಕಾರ್ಯದರ್ಶಿ ಲತಾ.ಕೆ.ರವರು ನ.ಆ.ಇ.267 ಮೈ.ಆ.ಪ್ರಾ 2023 ದಿನಾಂಕ 4-11-2023 ರ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ.