ಮೈಸೂರಿನಲ್ಲಿ ಮಕ್ಕಳ ಮಾರಾಟ ದಂಧೆ…?ಪತ್ರಕರ್ತ ಸೇರಿದಂತೆ ಐವರ ಬಂಧನ…ವಿಜಯನಗರ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮಗು ಪೋಷಕರ ವಶಕ್ಕೆ…
- TV10 Kannada Exclusive
- April 18, 2024
- No Comment
- 2351
ಮೈಸೂರು,ಏ18,Tv10 ಕನ್ನಡ
ಸಾಂಸ್ಕೃತಿಕ ನಗರಿಯಲ್ಲಿ ಮಗುವೊಂದನ್ನ ಅಪಹರಿಸಿ ಮಾರಾಟ ಮಾಡಲು ಯತ್ನಿಸಿದ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 1 ತಿಂಗಳು 9 ದಿನ ಹಸುಕಂದನನ್ನ ಅಪಹರಿಸಿ ಮಾರಾಟಮಾಡಲು ಯತ್ನಿಸಿದ್ದ ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಪ್ರಕರಣಕ್ಕೆ ಸಂಭಂಧಿಸಿದಂತೆ ವಿಜಯನಗರ ಠಾಣೆ ಪೊಲೀಸರು ಪತ್ರಕರ್ತ ಸೇರಿದಂತೆ ಐವರನ್ನ ಬಂಧಿಸಿದ್ದಾರೆ.ಅಪಹರಣಕ್ಕೆ ಒಳಗಾದ ಮಗುವನ್ನ ಪೊಲೀಸರು ಪೋಷಕರ ಮಡಿಲಿಗೆ ಸೇರಿಸಿದ್ದಾರೆ.
ಮೈಸೂರಿನ ಪತ್ರಕರ್ತ ಮಂಜುನಾಥ್,ನಾಗವಾಲದ ಇಂದ್ರಕುಮಾರ್,ವಿಜಯಲಕ್ಷ್ಮಿ,ಸುಪ್ರಿಯ ಹಾಗೂ ಮಂಡ್ಯದ ಕುಮಾರ್ ಬಂಧಿತರು.ಏಳು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಉಳಿದಿಬ್ಬರು ತಲೆಮರೆಸಿಕೊಂಡಿದ್ದಾರೆ.
ಮೈಸೂರಿನ ಹೊರವಲಯದ ಹಿನಕಲ್ ನ ಜೋಪಡಿಯಲ್ಲಿ ಬಿಹಾರ ಮೂಲದ ರಮಡಳ್ಳಿದೇವಿ ಹಾಗೂ ಜಿ.ಮಂಡಲ ದಂಪತಿ ತಮ್ಮ 1 ತಿಂಗಳು9 ದಿನ ಗಂಡು ಮಗು ಜೊತೆ ವಾಸವಿದ್ದರು.ಆರೋಪಿಗಳು ಸಂಚು ಹೂಡಿ ಜೋಪಡಿಯಲ್ಲಿ ಇದ್ದ ಮಗುವನ್ನ ಅಪಹರಿಸಿ ಪರಿಚಯವಿರುವ ಒಬ್ಬರಿಗೆ ಮಾರಾಟ ಮಾಡಲು ಮುಂದಾಗಿ ವ್ಯವಹಾರ ಕುದುರಿಸಿದ್ದರು.ಮಗು ಕಾಣೆಯಾದ ನಂತರ ಪೋಷಕರು ವಿಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಮಗುವನ್ನ ರಕ್ಷಿಸಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಗುವನ್ನ ಅಪಹರಿಸಿ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ವಿಜಯನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್,ಕಾನೂನು ಮತ್ತು ಸವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರು ಪ್ರಶಂಸಿಸಿದ್ದಾರೆ…