
ಸೆರೆಯಾದ ಚಿರತೆ ಜೊತೆ ಸೆಲ್ಫಿಗೆ ಯತ್ನ…ಯುವಕನ ಮೇಲೆ ದಾಳಿ ನಡೆಸಿದ ಚಿರತೆ…ಕೆ.ಆರ್.ಆಸ್ಪತ್ರೆಗೆ ದಾಖಲು…
- Mysore
- June 23, 2024
- No Comment
- 499
ಪಾಳು ಮನೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನ ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ಸೆರೆಯಾದ ಚಿರತೆ ಜೊತೆ ಸೆಲ್ಫಿ ಕಿಕ್ಕಿಸಲು ಯತ್ನಿಸಿದ ಯುವಕನ ಮೇಲೆ ದಾಳಿ ನಡೆಸಿದೆ.ಚಿರತೆ ದಾಳಿಯಿಂದ ಗಾಯಗೊಂಡ ಯುವಕನನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂಜನಗೂಡು ತಾಲೂಕು ಯಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸಾಕು ಪ್ರಾಣಿಗಳನ್ನ ಬಲಿ ಪಡೆಯುತ್ತಿದ್ದ ಚಿರತೆ ಮಹದೇವಪ್ಪ ಎಂಬುವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಅಡಗಿ ಕುಳಿತಿದೆ.ಹೊರಬರಲು ಸಾಧ್ಯವಾಗದಂತೆ ಸಂಪೂರ್ಣವಾಗಿ ಪಾಳು ಮನೆಯಲ್ಲಿ ಕೂಡಿಹಾಕಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆರ್ಎಫ್ಓ ನಿತಿನ್ ಕುಮಾರ್ ಮತ್ತು ಜನಾರ್ಧನ್ ರವರ ತಂಡ ಸ್ಥಳಕ್ಕೆ ಧಾವಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ವೇಳೆ ಸೆರೆಯಾದ ಚಿರತೆ ಬಳಿ ಬಂದ ಸ್ಥಳೀಯ ಯುವಕ ಜಯಶಂಕರ್ ಸೆಲ್ಫೀ ತೆಗೆಯಲು ಯತ್ನಿಸಿದ್ದಾನೆ.
ಈ ಸಂಧರ್ಭದಲ್ಲಿ ಚಿರತೆ ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.ಚಿರತೆ ದಾಳಿಯಿಂದ ಗಾಯಗೊಂಡ ಜಯಶಂಕರ್ ನನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆರೆಯಾಗಿರುವ ಗಂಡು ಚಿರತೆಗೆ ನಂಜನಗೂಡಿನ ನರ್ಸರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಡಿಸಿಎಫ್ ಬಸವರಾಜ್ ರವರ ಆದೇಶದ ಮೇರೆಗೆ ಚೇತರಿಸಿಕೊಂಡ ಬಳಿಕ ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಆರ್ಎಫ್ಒ ನಿತಿನ್ ಕುಮಾರ್ ಜನಾರ್ಧನ್ ಚೇತನ್ ಕುಮಾರ್ ಸೇರಿದಂತೆ ಸಾಕಷ್ಟು ಸಿಬ್ಬಂದಿಗಳು ಭಾಗವಹಿಸಿದ್ದಾರೆ…