ಸಸ್ಪೆಂಡ್ ಆದ ಪೊಲೀಸ್ ಪೇದೆಗೆ ಸಿಎಂ ಮೆಡಲ್…ಇದೆಂಥಾ ವ್ಯವಸ್ಥೆ…
- TV10 Kannada Exclusive
- August 15, 2024
- No Comment
- 10625
ಮೈಸೂರು,ಆ15,Tv10 ಕನ್ನಡಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ,ದಾಖಲೆಗಳ ಸೋರಿಕೆ ಮಾಡುವ ಶಂಕೆ ಇವೆಲ್ಲಾ ಆರೋಪಗಳ ಹಿನ್ನಲೆ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದೆ.2023 ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟವಾಗಿದೆ.ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಭಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣೀಭೂತರಾಗಿರುತ್ತಾರೆ.ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳು ಸೋರಿಕೆಯಾಗಿ ಸಾರ್ವಜನಿಕರ ಸ್ವತ್ತುಗಳು ಹೆಚ್ಚು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವುದಾಗಿ ಕಾರಣ ನೀಡಿ ಸಲೀಂ ಪಾಷಾ ರವರನ್ನ ಸಸ್ಪೆಂಡ್ ಮಾಡಲಾಗಿದೆ.ಹೀಗಿದ್ದೂ ಸಲೀಂ ಪಾಷಾ ಹೆಸರು ಮುಖ್ಯಮಂತ್ರಿಗಳ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುವುದು ಇಲಾಖಾ ವ್ಯವಸ್ಥೆಯನ್ನ ಅನುಮಾನದಿಂದ ನೋಡುವಂತಾಗಿದೆ.ಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದಲ್ಲಿ ಸಾಕಷ್ಟು ಹಂತಗಳಿವೆ.ಹಿರಿಯ ಅಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ.ಹೀಗಿದ್ದರೂ ಪದಕ ಪಡೆಯುವಲ್ಲಿ ಅರ್ಹತೆ ಪಡೆದಿದ್ದಾರೆ ಅಂದ್ರೆ ಇಡೀ ವ್ಯವಸ್ಥೆಯನ್ನ ಅನುಮಾನದಿಂದ ನೋಡಲೇ ಬೇಕಾಗುತ್ತದೆ.ಅಧಿಕಾರಿಯೊಬ್ಬರ ಅಭಿಪ್ರಾಯದಂತೆ ಇದು 2023 ರ ಕರ್ತವ್ಯದ ಆಧಾರದ ಮೇಲೆ ಕೊಟ್ಟಿದ್ದಾರೆಂದು ಸಮರ್ಥಿಸಿಕೊಳ್ಳಲಾಗುತ್ತಿದೆ.ಹಾಗಿದ್ದಲ್ಲಿ ಕಳೆದ ವರ್ಷ ಒಳ್ಳೆಯವನಾದ ವ್ಯಕ್ತಿ ಈ ವರ್ಷ ಕಳ್ಳನಾದರೆ ಆತ ಒಳ್ಳೆಯವನೆಂದೇ ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ.ಒಟ್ಟಾರೆ ಸಲೀಂ ಪಾಷಾ ರವರಿಗೆ ಮುಖ್ಯಮಂತ್ರಿಗಳ ಪದಕ ದಕ್ಕಿರುವುದು ಸೋಜಿಗವಲ್ಲದೆ ಇನ್ನೇನು…? ಇದಕ್ಕೆ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡುವರೇ…?