
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…
- TV10 Kannada Exclusive
- October 12, 2025
- No Comment
- 41
ಮೈಸೂರು,ಅ12,Tv10 ಕನ್ನಡ
ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ ರಾಜೇಂದ್ರನಗರದ ನಿವಾಸಿ ಗಜೇಂದ್ರ ಎಂಬುವರೇ ವಂಚನೆಗೆ ಒಳಗಾದವರು.ಆಲನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ನಗರದ ಚೀರನಹಳ್ಳಿ ಮೂಲದ ಪೊಲೀಸ್ ಪೇದೆ ಶಿವಕುಮಾರ್ ಸೇರಿದಂತೆ 7 ಮಂದಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಟ್ಟಗಳ್ಳಿಯಲ್ಲಿರುವ ಯೂನಿವರ್ಸಲ್ ಡೆವಲಪರ್ಸ್ ಹೆಸರಲ್ಲಿ ಗಜೇಂದ್ರ ರವರಿಗೆ ವಂಚಿಸಿದ್ದಾರೆ.ಕನಕದಾಸ ನಗರದ ಉಮೇಶ್,ಪೊಲೀಸ್ ಪೇದೆ ಶಿವಕುಮಾರ್,ದಟ್ಟಗಳ್ಳಿಯ ಕೃಷ್ಣಮೂರ್ತಿ,ಕೇರ್ಗಳ್ಳಿಯ ಮಲ್ಲಿಕಾರ್ಜುನ್,ಕುಂಬಾರಕೊಪ್ಪಲಿನ ಹೇಮಂತ್ ಕುಮಾರ್,ದಟ್ಟಗಳ್ಳಿಯ ಜ್ಯೋತಿ ಹಾಗೂ ದೀಪಾ ರವರ ವಿರುದ್ದ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತಿ ಹೊಂದಿ ಅಂಕನಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಗಜೇಂದ್ರ ರವರನ್ನ ಆಲನಹಳ್ಳಿ ಠಾಣೆಯ ಪೇದೆ ಶಿವಕುಮಾರ್ 2022 ರಲ್ಲಿ ಸಂಪರ್ಕಿಸಿ ಲ್ಯಾಂಡ್ ಡೆವಲಪ್ ಮೆಂಟ್ ಹಾಗೂ ಶೇರು ವಹಿವಾಟಿನ ಬಗ್ಗೆ ಆಸಕ್ತಿ ತುಂಬಿದ್ದಾರೆ.ದಟ್ಟಗಳ್ಳಿಯಲ್ಲಿರುವ ಯೂನಿವರ್ಸಲ್ ಡೆವಲಪರ್ಸ್ ಕಚೇರಿಗೆ ಕರೆದೊಯ್ದು ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಹೇರಳವಾಗಿ ಸಂಪಾದಿಸಬಹುದು ಹಾಗೂ ಶೇರು ವಹಿವಾಟಿನಲ್ಲಿ ಹಣ ಹೂಡಿ ಹೆಚ್ಚಿನ ಲಾಭಾಂಶ ಗಳಿಸಬಹುದೆಂದು ನಂಬಿಸಿದ್ದಾರೆ.ಈಗಾಗಲೇ ರಾಮನಗರ,ಸಕಲೇಶಪುರದಲ್ಲಿ ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಪ್ರಾಜೆಕ್ಟ್ ನಡೆಯುತ್ತಿರುವ ಬಗ್ಗೆ ತಿಳಿಸಿ ನಂಬುವಂತೆ ಮಾಡಿದ್ದಾರೆ.ಈ ವಹಿವಾಟಿನಲ್ಲಿ ನಿವೃತ್ತ ಡಿಸಿಪಿ ಮಲ್ಲಿಕಾರ್ಜುನಪ್ಪ ಹಾಗೂ ಶಿಕ್ಷಣ ಇಲಾಖೆಯ ಹೊನ್ನಪ್ಪ ಎಂಬುವರೂ ಸಹ ಹಣ ಹೂಡಿಕೆ ಮಾಡಿ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆಂದು ನಂಬಿಸಿದ್ದಾರೆ.ಪೇದೆ ಶಿವಕುಮಾರ್ ಸಹ ತಾನೂ ಹಣ ಹೂಡಿರುವುದಾಗಿ ಹಾಗೂ ಹೂಡಿದ ಹಣಕ್ಕೆ ತಾನು ಗ್ಯಾರೆಂಟಿ ಎಂಬ ಮಾತನ್ನ ನಂಬಿದ ಗಜೇಂದ್ರ ರವರು ತಾವೂ ಸಹ ಇನ್ವೆಸ್ಟ್ ಮಾಡಲು ಮುಂದಾಗಿದ್ದಾರೆ.
ಮೊದಲು ಎರಡು ಲಕ್ಷ ಹೂಡಿಕೆ ಮಾಡಿದ್ದಾರೆ.ನಂತರ ಯೂನಿವರ್ಸಲ್ ಡೆವಲಪರ್ಸ್ ನಲ್ಲಿ ಐಡಿ ಕ್ರಿಯೇಟ್ ಮಾಡುವುದಾಗಿ ನಂಬಿಸಿ ಗಜೇಂದ್ರ ರವರಿಂದ ಆಧಾರ್ ಕಾರ್ಡ್,ಪಾನ್ ಕಾರ್ಡ್ ಹಾಗೂ ಪಾಸ್ ಬುಕ್ ಗಳನ್ನ ಪಡೆದಿದ್ದಾರೆ.ವಂಚಕರ ಮಾತನ್ನ ನಂಬಿದ ಗಜೇಂದ್ರ ಹಂತ ಹಂತವಾಗಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದಾರೆ.ಇದೇ ವೇಳೆ ಗಜೇಂದ್ರ ರವರ ಅರಿವಿಗೆ ಬರದಂತೆ ಬ್ಯಾಂಕ್ ನಿಂದ ಸಹ ಲಕ್ಷಾಂತರ ಹಣ ವರ್ಗಾವಣೆ ಮಾಡಿ ಇವರ ಅನುಮತಿ ಪಡೆಯದೆ ಶೇರು ವಹಿವಾಟಿನಲ್ಲಿ ತೊಡಗಿಸಿದ್ದಾರೆ.ವಹಿವಾಟಿನಲ್ಲಿ ನಷ್ಟ ಉಂಟಾದರೆ ಕಂಪನಿಯೇ ಭರಿಸುತ್ತದೆ ಎಂಬ ಭರವಸೆ ನೀಡಿದ ಹಿನ್ನಲೆ ಗಜೇಂದ್ರ ರವರು ಹಣ ಹೂಡಿದ್ದಾರೆ.ಕೆಲವೇ ದಿನಗಳಲ್ಲಿ ಇವರ ಜಾಲದಲ್ಲಿ ಸಿಲಿಕಿರುವ ಅನುಭವ ಗಜೇಂದ್ರ ರವರಿಗೆ ಮನದಟ್ಟಾಗಿದೆ.ಹಣ ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಒಂದು ತಿಂಗಳ ಗಡುವು ಕೇಳಿದ್ದಾರೆ.ಪೇದೆ ಶಿವಕುಮಾರ್ ಸಹ ಕ್ರಮ ಕೈಗೊಂಡರೆ ತನ್ನ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಅವಲತ್ತುಕೊಂಡಿದ್ದಾರೆ.
ತಮ್ಮ ಹಣ ಹಿಂದಿರುಗಿಸುವಂತೆ ಎಷ್ಟುಬಾರಿ ಮನವಿ ಮಾಡಿದರೂ ಆರೋಪಿಗಳಿಂದ ಸೂಕ್ತ ಸ್ಪಂದನೆ ದೊರೆತಿಲ್ಲ.ಹೀಗಾಗಿ ಗಜೇಂದ್ರ ರವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.ಘನ ನ್ಯಾಯಾಲಯ ಪೇದೆ ಶಿವಕುಮಾರ್ ಸೇರಿದಂತೆ 7 ಮಂದಿ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದೆ.ಸಧ್ಯ 2.5 ಕೋಟಿಗೂ ಹೆಚ್ಚು ಹಣ ಕಳೆದುಕೊಂಡು ವಂಚನೆಗೆ ಒಳಗಾದ ಗಜೇಂದ್ರ ರವರು 7 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…