ಕಾರ್ಯನಿರತ ಪತ್ರಕರ್ತ ಸಂಘದ 2025-28 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ.
- TV10 Kannada Exclusive
- January 1, 2026
- No Comment
- 29

ಕಾರ್ಯನಿರತ ಪತ್ರಕರ್ತ ಸಂಘದ 2025-28 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ.


ಹನೂರು. Tv10 ಕನ್ನಡ
01/01/2026
ಹನೂರು : ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗದಂತೆ ಪತ್ರಿಕಾ ರಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹನೂರು ತಾಲೂಕು ಘಟಕ ರಾಜ್ಯದಲ್ಲಿಯೇ ಹೆಸರುವಾಸಿ ಮತ್ತು ಮುಂಜೂಣಿಯಲ್ಲಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಕಮ್ಮವಾರು ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ನಂತರ ಅವರು ಮಾತನಾಡಿದರು.
ಪತ್ರಕರ್ತರ ಕೆಲಸ ಕಷ್ಟಕರವಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಪತ್ರಕರ್ತರು ಸುದ್ದಿ ಸಮಾಚಾರಗಳನ್ನು ಜನತೆಗೆ ತಲುಪಿಸುವುದರಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಉಚಿತ ಬಸ್ ಪಾಸ್ ನೀಡಿದ್ದರೂ ಕೂಡ ಕೆಲವು ಕಠಿಣ ನಿಯಮಗಳಿಂದ ಪಡೆಯಲು ಸಾಧ್ಯವಾಗದೆ ಇರುವುದರಿಂದ ಸರ್ಕಾರ ಸಡಿಲಿಕರಣಗೊಳಿಸಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ಸಹಕಾರ ನೀಡಲಿದ್ದೇನೆ. ನಿವೇಶನ ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳೊಡನೆ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನೂತನ ಪದಾಧಿಕಾರಿಗಳು ಸಂಘ ರಾಜ್ಯಕ್ಕೆಮಾದರಿಯಾಗಲಿ ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಹನೂರು ಪತ್ರಕರ್ತರ ಸಂಘ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯ, ವಿವಿಧ ಕ್ಷೇತ್ರಗಳಲ್ಲಿನ ಸಂಘ ಸಂಸ್ಥೆಗಳು ಚುನಾವಣೆಗಳಿಂದ ಕಲುಷಿತಗೊಂಡಿವೆ. ಅದೇ ಮಾದರಿಯಲ್ಲಿ ಪತ್ರಕರ್ತರ ಸಂಘ ಸಾಗುವ ಬದಲು ಶುದ್ದಿಕರಣಗೊಳ್ಳಬೇಕು. 170 ಕಿ.ಮಿ.ವಿಸ್ತೀರ್ಣ ಹೊಂದಿರುವ ಕ್ಷೇತ್ರದಲ್ಲಿ ಟವರ್ ಸಮಸ್ಯೆ, ರಸ್ತೆ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಸಮಸ್ಯೆಗಳ ನಡುವೆ ಹನೂರು ಪತ್ರಕರ್ತರು ವಸ್ತುನಿಷ್ಠ ವರದಿಯನ್ನು ಮಾಡುತ್ತಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದು ಅವರ ಸಮಸ್ಯೆಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿದ್ದಾರೆ. ಸಮುದಾಯ ಭವನ ಆದಷ್ಟು ಬೇಗಾ ಪೂರ್ಣಗೊಳ್ಳಲಿ ಎಂದರು.
ರಾಜ್ಯದ ಇತಿಹಾಸದಲ್ಲಿಯೇ ಪತ್ರಕರ್ತರೋರ್ವರು ವಿಧಾನ ಪರಿಷತ್ ಸದಸ್ಯರಾಗಿರಲಿಲ್ಲ ಆದರೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ವಿಧಾನ ಪರಿಷತ್ತಿನಲ್ಲಿ ಪತ್ರಕರ್ತರ ಧ್ವನಿಯಾಗಿರಲು ಪತ್ರಕರ್ತ ಶಿವಕುಮಾರ್ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಅವರು ಸಹ ಪತ್ರಕರ್ತರ ಧ್ವನಿಯಾಗಿ ಪತ್ರಕರ್ತರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಮ್ಮ ಸೇವೆ ಸಲ್ಲಿಸಲಿ ಎಂದರು.
ಬಿಜೆಪಿ ಮುಖಂಡ ನಿಶಾಂತ್ ಮಾತನಾಡಿ, ಹನೂರು ಪತ್ರಕರ್ತರಲ್ಲಿನ ಒಗ್ಗಟ್ಟು ಮೆಚ್ಚುವಂತದ್ದು, ಇದೆ ರೀತಿ ಉತ್ತಮ ಸುದ್ದಿಗಳನ್ನು ಪ್ರಕಟಿಸಿ, ಆದಷ್ಟು ಬೇಗಾ ಪತ್ರಕರ್ತರ ಭವನ ಪೂರ್ಣಗೊಳ್ಳಲಿ. ಮುಂದಿನ ಪದಗ್ರಹಣ ಕಾರ್ಯಕ್ರಮ ಸ್ವಂತ ಭವನದಲ್ಲಿ ನಡೆಯುವಂತಾಗಲಿ, ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಪತ್ರಕರ್ತರು ಹಾಗೂ ರೈತ ಸಂಘಟನೆ ನಡುವೆ ಅವಿನಾವಭಾವ ಸಂಬಂಧವಿದೆ. ರೈತರು ಬೀದಿಗಿಳಿದರೆ ಅವರ ಜೊತೆ ಬರುವವರು ಪತ್ರಕರ್ತರು. ಪತ್ರಕರ್ತರಿಗೆ ಸಾರಿಗೆ ಸೌಕರ್ಯ, ನಿವೇಶನ, ವಸತಿ, ಭವನ, ಸೇರಿದಂತೆ ಇನ್ನಿತರ ಸೌಲಭ್ಯ ಗಳನ್ನು ಜನಪ್ರತಿನಿದಿನಗಳು ಸರ್ಕಾರ ಗಳು ಒದಗಿಸಿ ಕೊಡಬೇಕು ಎಂದರು.
ಕ್ಯಾಲೆಂಡರ್ ಬಿಡುಗಡೆ : ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೊರ ತಂದಿರುವ 2026ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರ್ ಪ್ರಸಾದ್ ಪ್ರಮಾಣ ವಚನ ಬೋಧಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಲಿಂಗ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರ್ ಪ್ರಸಾದ್, ರಾಜ್ಯಕಾರಣಿ ಸಮಿತಿ ಸದಸ್ಯ ಮಹೇಂದ್ರ, ನಿಕಟ ಪೂರ್ವ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಹನೂರು ತಾಲೂಕು ನಿಕಟ ಪೂರ್ವ ಅಧ್ಯಕ್ಷ ಮಹಾದೇಶ್, ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಬಸವರಾಜು, ಹಾಲಿ ಅಧ್ಯಕ್ಷ ದೇವರಾಜ ನಾಯ್ಡು ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ರೈತ ಸಂಘದ ಮುಖಂಡರುಗಳಾದ ಹೊನ್ನೂರು ಪ್ರಕಾಶ್, ಗೌಡೇಗೌಡ, ಅಮ್ಜದ್ ಖಾನ್, ಶೈಲೇoದ್ರ, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳಾದ ಬಸವರಾಜು,ಹರೀಶ್, ಸೇರಿದಂತೆ ಇನ್ನಿತರರು ಇದ್ದರು.
ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು