ಹುಲ್ಲಹಳ್ಳಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…ನಿರ್ಲಕ್ಷ್ಯಕ್ಕೆ ಒಳಗಾದ 11 ನೇ ಶತಮಾನದ ಇತಿಹಾಸ ಸುಪ್ರಸಿದ್ದ ದೇವಾಲಯ…
- TV10 Kannada Exclusive
- January 4, 2026
- No Comment
- 42

ಹುಲ್ಲಹಳ್ಳಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…ನಿರ್ಲಕ್ಷ್ಯಕ್ಕೆ ಒಳಗಾದ 11 ನೇ ಶತಮಾನದ ಇತಿಹಾಸ ಸುಪ್ರಸಿದ್ದ ದೇವಾಲಯ…




ನಂಜನಗೂಡು,ಜ4,Tv10 ಕನ್ನಡ
ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ಕಪಿಲಾ ನದಿ ದಂಡೆಯ ಬಳಿ ನಿಂತು ಕಣ್ಣು ಹಾಯಿಸಿದರೆ ಕಂಡುಬರುವುದೇ 11 ನೇ ಶತಮಾನದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮಿ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಯೋಗಭೋಗ ನರಸಿಂಹಸ್ವಾಮಿ ದೇವಾಲಯ.11 ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನ ಸಂಸ್ಥಾನದ ಕೋಶಾಧಿಕಾರಿಯಾಗಿದ್ದ ಜೈನದೊರೆ ಬಿಟ್ಟಿದೇವ ನಿರ್ಮಿಸಿದ ಬೃಹತ್ ವಿಸ್ತಾರದ ದೇವಾಲಯವಿದು.ಬಹುತೇಕ ಕಲ್ಲುಗಳಿಂದ ನಿರ್ಮಿಸಲಾಗಿದೆ.5 ಗೋಪುರಗಳಿರುವ ದೇವಾಲಯವಿದು.ಸುಮಾರು ಒಂದು ಎಕ್ರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಬೃಹತ್ ದೇವಾಲಯ.ಸಧ್ಯ ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ವಶದಲ್ಲಿದೆ.11 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಅಪಾರ ಸಂಖ್ಯೆಯ ಭಕ್ತರನ್ನೇ ಹೊಂದಿತ್ತು.ಪ್ರಸಿದ್ದ ದೇವಾಲಯಗಳ ಸಾಲಿನಲ್ಲೂ ಸಹ ಗುರುತಿಸಿಕೊಂಡಿತ್ತು.ವಿಶೇಷ ಪೂಜೆ ಪುನಸ್ಕಾರಗಳಿಂದ ತನ್ನದೇ ಆದ ಖ್ಯಾತಿ ಹೊಂದಿತ್ತು.ವರುಷಗಳು ಉರುಳುತ್ತಿದ್ದಂತೇ ದೇವಾಲಯ ಪ್ರಸಿದ್ದತೆ ಇತಿಹಾಸದಲ್ಲಿ ಹುದುಗಿಹೋಗುತ್ತಿದೆ.ಸೂಕ್ತ ನಿರ್ವಹಣೆ ಇಲ್ಲದೆ ಮೂಕರೋಧನೆ ಅನುಭವಿಸುತ್ತಿದೆ.ವೈಭವದಿಂದ ನಡೆಯುತ್ತಿದ್ದ ಧಾರ್ಮಿಕ ಕೈಂಕರ್ಯಗಳು ಸ್ಥಗಿತಗೊಂಡಿವೆ.ಕೇವಲ ಸಂಪ್ರದಾಯಕ್ಕಾಗಿ ಪೂಜೆಗಳು ನೆರವೇರುತ್ತಿವೆ.ಇಲ್ಲಿ ಪ್ರಮುಖ 5 ಗೋಪುರಗಳ ಜೊತೆಗೆ 22 ದೇವರುಗಳಿಗೂ ಗೋಪುರಗಳನ್ನ ನಿರ್ಮಿಸಲಾಗಿದೆ.ವಿಜೃಂಭಣೆಯಿಂದ ನೆರವೇರುತ್ತಿದ್ದ ಕಾರ್ಯಕ್ರಮಗಳೆಲ್ಲವೂ ನಿಂತುಹೋಗಿದೆ.ಕಾಲಕ್ರಮೇಣ ದೇವಾಲಯ ಶಿಥಿಲಗೊಳ್ಳುತ್ತಾ ಯಾವುದೇ ಸಮಯದಲ್ಲಾದರೂ ಕುಸಿದು ಬೀಳುವ ಸ್ಥಿತಿ ತಲುಪಿದ್ದಾಗ ಸುಮಾರು 50 ವರ್ಷಗಳ ಹಿಂದೆ ಅಭಿವೃದ್ದಿಗೆ ನಾಂದಿ ಹಾಡಲಾಯಿತು.ಗ್ರಾಮಪಂಚಾಯ್ತಿ ಅಧ್ಯಕ್ಷರು ವಿಶೇಷ ಆಸಕ್ತಿ ವಹಿಸಿ ಪುನರುಜ್ಜೀವನ ಕಾರ್ಯಕ್ಕೆ ಮುಂದಡಿ ಇಟ್ಟರು.ಕೆಲವು ಅಭಿವೃದ್ದಿ ಕಾರ್ಯಗಳು ಹೊರತುಪಡಿಸಿದರೆ ಪ್ರಮುಖ ಕಾರ್ಯಗಳು ನಡೆದಿಲ್ಲ.ಗೋಡೆಗಳು ಕುಸಿದುಬೀಳುವ ಹಂತ ತಲುಪಿದೆ.ಗರ್ಭಗುಡಿಯಲ್ಲಿ ಸೋರಿಕೆ ಇದೆ.ಗೋಪುರಗಳೂ ಸಹ ಶಿಥಿಲಗೊಳ್ಳುತ್ತಿವೆ.ಗತಿಸಿಹೋದ ವೈಭವವಕ್ಕೆ ಮತ್ತೆ ಮರುಜೀವ ತುಂಬಲು ಸ್ಥಳೀಯರು ಟೊಂಕ ಕಟ್ಟಿ ನಿಂತಿದ್ದಾರೆ.ಟ್ರಸ್ಟ್ ನಿರ್ಮಿಸಿ ದೇಣಿಗೆ ಸಂಗ್ರಹಿಸಿ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ.15 ಶತಮಾನಗಳ ಇತಿಹಾಸವಿರುವ ದೇವಾಲಯದ ಅಭಿವೃದ್ದಿಗೆ ಧಾರ್ಮಿಕದತ್ತಿ ಇಲಾಖೆ ಸಹ ತಲೆ ಕೆಡಿಸಿಕೊಳ್ಳದಿರುವುದು ವಿಪರ್ಯಾಸ.ದೇವಾಲಯಕ್ಕೆ ಸೇರಿದ ರಥ ಕಪಿಲಾ ನದಿಯಲ್ಲಿ ಮುಳುಗಿಹೋಗಿದೆ ಎಂದು ಸಹ ಹಿರಿಯರ ಅಭಿಪ್ರಾಯ.ನವರಾತ್ರಿ ಉತ್ಸವದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿತ್ತು.ರಥಸಪ್ತಮಿ ಹಾಗೂ ವೈಕುಂಠ ಏಕಾದಶಿ ಬಂದ್ರೆ ಈ ದೇವಾಲಯದಲ್ಲಿ ವಿಜೃಂಭಣೆ ಮನೆ ಮಾಡುತ್ತಿತ್ತು.ಭಕ್ತರಿಗೆ ವಿಶೇಷವಾದ ಮುದ ನೀಡುತ್ತಿತ್ತು.ಅಪಾರ ಸಂಖ್ಯೆಯ ಭಕ್ತರನ್ನೊಳಗೊಂಡ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಸ್ಥಳೀಯ ಶಾಸಕರಾಗಲಿ ಜನಪ್ರತಿನಿಧಿಗಳಾಗಲಿ ಅಭಿವೃದ್ದಿಗಾಗಿ ಯಾವುದೇ ರೀತಿಯ ಆಸಕ್ತಿ ತೋರಿಸುತ್ತಿಲ್ಲ.ಇನ್ನು ಧಾರ್ಮಿಕ ದತ್ತಿ ಇಲಾಖೆಗಂತೂ ಈ ದೇವಾಲಯ ಇದೆ ಎಂಬುದರ ಬಗ್ಗೆ ಗಮನವೂ ಇಲ್ಲ.ಸ್ಥಳೀಯರು ರಚಿಸಿದ ಟ್ರಸ್ಟ್ ಒಂದರಿಂದಲೇ ಅಭಿವೃದ್ದಿಯ ಆಶಾಭಾವನೆ ಇದೆ.ಆದ್ರೆ ಆರ್ಥಿಕ ಸಮಸ್ಯೆ ಬಗೆಹರಿಯಬೇಕಿದ್ದಲ್ಲಿ ದಾನಿಗಳು ಮುಕ್ತಮನಸ್ಸಿನಿಂದ ಕೈ ಜೋಡಿಸಬೇಕಿದೆ.ಈ ಸ್ಥಳಕ್ಕೆ ಬಂದು ಒಮ್ಮೆ ನಿಂತು ಆಳವಾಗಿ ಗಮನಿಸಿದರೆ ದೇವಾಲಯವೇ ತನ್ನ ಕಥೆ ಹೇಳುತ್ತಿರುವ ಭಾಸವಾಗುತ್ತದೆ.ಇತಿಹಾಸ ಪ್ರಸಿದ್ದ ದೇವಾಲಯ ಉಳಿಸಿಕೊಳ್ಳಲು ದಾನಿಗಳ ಕೈ ಜೋಡಿಸಬೇಕಾದ ಅನಿವಾರ್ಯತೆ ಇದೆ.ಗತಿಸಿಹೋದ ವೈಭವವನ್ನ ಪುನರ್ ಸ್ಥಾಪನೆಗೆ ವಿಶಾಲ ಹೃದಯ ಭಕ್ತರು ಮನಸ್ಸು ಕೊಡಬೇಕಿದೆ.ಮುಂದಿನ ದಿನಗಳಾದರೂ ಈ ದೇವಾಲಯಕ್ಕೆ ಕಾಯಕಲ್ಪ ಲಭಿಸುವುದೇ…?ಪುರಾತನ ಪ್ರಸಿದ್ದ ದೇವಾಲಯ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವುದೇ…? ಮತ್ತೆ ತನ್ನ ಅಪಾರ ಸಂಖ್ಯೆ ಭಕ್ತರನ್ನ ತನ್ನತ್ತ ಸೆಳೆಯುವುದೇ…?