ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್ ಮುಚ್ಚುವಿಕೆ: ಪ್ರೊ. ಕೆ.ಎಸ್. ರಂಗಪ ತೀವ್ರ ಅಸಮಾಧಾನ
- TV10 Kannada Exclusive
- March 17, 2026
- No Comment
- 10
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್ ಮುಚ್ಚುವಿಕೆ: ಪ್ರೊ. ಕೆ.ಎಸ್. ರಂಗಪ ತೀವ್ರ ಅಸಮಾಧಾನ
ಮೈಸೂರು: 100 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್ಗಳನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿರುವ ಕುರಿತು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ನನ್ನ 70 ವರ್ಷದ ಸೇವಾ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಕೊರತೆ ಎಂಬುದು ಕಂಡಿಲ್ಲ. ಈಗ ಕೊರತೆ ಇದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ಇದು ವಿಶ್ವವಿದ್ಯಾನಿಲಯದ ಕಮಿಟ್ಮೆಂಟ್ ಕೊರತೆಯೋ ಅಥವಾ ವ್ಯವಸ್ಥಾತ್ಮಕ ವೈಫಲ್ಯವೋ ಅರ್ಥವಾಗುತ್ತಿಲ್ಲ” ಎಂದು ಅವರು ಕಿಡಿಕಾರಿದರು.
ಕೆಲವು ವಿಭಾಗಗಳನ್ನು ಮುಚ್ಚುತ್ತಿರುವುದಾಗಿ ಹೇಳಿ “ವಿದ್ಯಾರ್ಥಿಗಳು ಬರುವುದಿಲ್ಲ” ಎಂಬ ಕಾರಣ ನೀಡಲಾಗುತ್ತಿದೆ. ಆದರೆ ಸರಿಯಾದ ಕೋರ್ಸ್ಗಳು ಮತ್ತು ಸೌಲಭ್ಯಗಳನ್ನು ಒದಗಿಸಿದರೆ ವಿದ್ಯಾರ್ಥಿಗಳು ಖಂಡಿತ ಬರುತ್ತಾರೆ ಎಂದು ಅವರು ಹೇಳಿದರು.
ಯುವರಾಜ ಕಾಲೇಜಿನ ಸ್ವಾಯತ್ತ (Autonomous) ಸ್ಥಾನಮಾನವನ್ನು ಹಿಂಪಡೆಯುವ ನಿರ್ಧಾರಕ್ಕೂ ಅವರು ವಿರೋಧ ವ್ಯಕ್ತಪಡಿಸಿದರು. “ಕಾನ್ಫಿಡೆನ್ಷಿಯಲ್ ವರದಿ ಆಧಾರವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನುವುದು ತಿಳಿದುಬಂದಿದೆ. ಸ್ವಾಯತ್ತತೆ ತೆಗೆದುಹಾಕುವುದು ವಿಶ್ವವಿದ್ಯಾನಿಲಯವನ್ನು ದುರ್ಬಲಗೊಳಿಸುವಂತೆಯೇ” ಎಂದರು.
“ನಾನು ಕುಲಪತಿಯಾಗಿದ್ದಾಗ ಯುವರಾಜ ಕಾಲೇಜಿಗೆ ಸ್ವಾಯತ್ತತೆ ತರುವಲ್ಲಿ ಶ್ರಮಿಸಿದ್ದೆ. ಯುವರಾಜ ಮತ್ತು ಮಹಾರಾಜ ಕಾಲೇಜುಗಳು ವಿಶ್ವವಿದ್ಯಾನಿಲಯದ ಎರಡು ಕಣ್ಣುಗಳಂತಿವೆ. ಈಗ ಏಕಾಏಕಿ ಸ್ವಾಯತ್ತತೆ ಕೈಬಿಡುವುದು ಅರ್ಥವಾಗುವುದಿಲ್ಲ” ಎಂದು ಆಕ್ಷೇಪಿಸಿದರು.
ಶಿಕ್ಷಕರ ಕೊರತೆ ಎನ್ನುವ ಕಾರಣವನ್ನು ತಳ್ಳಿ ಹಾಕಿದ ರಂಗಪ, “ಅಟಾನಾಮಸ್ ಸ್ಥಾನಮಾನ ಒಂದು ಶ್ರೇಷ್ಠ ಸಾಧನೆ. ಅದನ್ನು ಮುಚ್ಚುವುದು ಸರಿಯಲ್ಲ. ಬಿಎಸ್ಸಿ ಮಾತ್ರ ಉಳಿಸಿ ಉಳಿದ ಕೋರ್ಸ್ಗಳನ್ನು ಕಡಿತಗೊಳಿಸುವುದು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ” ಎಂದು ಹೇಳಿದರು.
ಶಿಕ್ಷಕರಲ್ಲಿ ಹೊಣೆಗಾರಿಕೆ (accountability) ಕೊರತೆ ಇದೆ ಎಂದು ಸೂಚಿಸಿದ ಅವರು, ಸರ್ಕಾರ ಮತ್ತು ರಾಜ್ಯಪಾಲರು ಈ ವಿಷಯದಲ್ಲಿ ಚರ್ಚೆ ನಡೆಸಿ ಸ್ವಾಯತ್ತ ಸ್ಥಾನಮಾನವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
“ಸರಿಯಾದ ಕೋರ್ಸ್ಗಳು ಮತ್ತು ಸೌಲಭ್ಯಗಳನ್ನು ನೀಡಿದರೆ ವಿದ್ಯಾರ್ಥಿಗಳು ಖಂಡಿತ ಬರುತ್ತಾರೆ. ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸ್ಥಾಪಿಸಿದ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಒಳ್ಳೆಯದಲ್ಲ” ಎಂದು ರಂಗಪ ಎಚ್ಚರಿಸಿದರು.