ಬೆಂಗಳೂರು:ಪಟಾಕಿ ದುರಂತ…13 ಮಂದಿ ಸಜೀವ ದಹನ…
- Crime
- October 8, 2023
- No Comment
- 264
ಬೆಂಗಳೂರು,ಅ7,Tv10 ಕನ್ನಡ
ಪಟಾಕಿ ದುರಂತದಲ್ಲಿ 13 ಕಾರ್ಮಿಕರು ಸಜೀವ ದಹನವಾದ ಘಟನೆ ಬೆಂಗಳೂರಿನ ಆನೇಕಲ್ ನ ಅತ್ತಿಬೆಲೆಯಲ್ಲಿ ನಡೆದಿದೆ.ಇಂದು ಮಧ್ಯಾಹ್ನ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡು 13 ಮಂದಿ ನಾಪತ್ತೆಯಾಗಿದ್ದರು.
ಆದರೆ, ನಾಪತ್ತೆಯಾಗಿದ್ದ 13 ಕಾರ್ಮಿಕರು ಸಜೀವ ದಹನವಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ.
ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು.ಆದರೆ ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ.
ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯಲ್ಲಿ ದುರಂತ ನಡೆದಿದೆ. ಪಟಾಕಿ ಬಾಕ್ಸ್ಗಳನ್ನು ತಂದು ಲಾರಿಯಿಂದ ಅನ್ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ.
ಮಳಿಗೆ ಪಕ್ಕದಲ್ಲಿಯೇ ಇದ್ದ ಗೋದಾಮಿಗೂ ಬೆಂಕಿ ತಗುಲಿದೆ. ಅಕ್ಕ-ಪಕ್ಕದಲ್ಲಿದ್ದ ನಾಲ್ಕೈದು ಅಂಗಡಿಗಳು, ಒಂದು ಕ್ಯಾಂಟರ್ ಸೇರಿದಂತೆ ನಾಲ್ಕೈದು ವಾಹನಗಳು ಸುಟ್ಟು ಭಸ್ಮವಾಗಿವೆ.
ಹೆದ್ದಾರಿ ಪಕ್ಕದಲ್ಲಿಯೇ ಪಟಾಕಿ ಮಳಿಗೆ ಇರುವುದರಿಂದ ನೂರಾರು ಜನರು ಜಮಾಯಿಸಿದ್ದರು. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಸಾಹಸ ಪಟ್ಟಿದ್ದಾರೆ.
ಪಟಾಕಿ ಮಳಿಗೆಯಲ್ಲಿ ಬೆಂಕಿ ತೀವ್ರತೆ ಹೆಚ್ಚಾಗುತ್ತಿದ್ದು, ಸಹಾಯಕ್ಕೆ ತಮಿಳುನಾಡು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯ ತಹಸೀಲ್ದಾರ್ ಶಿವಪ್ಪ ಲಮಾಣಿ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನಾಗೇಶ್ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ…