
ಸಿಎಂ ತವರಿನಲ್ಲಿ ಅಸ್ಪೃಶ್ಯತೆ ಆಚರಣೆ…ಅನಿಷ್ಟ ಪದ್ದತಿಗೆ ಬಿಸಿ ಮುಟ್ಟಿಸಿದ ಜಿಲ್ಲಾಡಳಿತ…ಗ್ರಾಮಸ್ಥರಿಗೆ ಖಡಕ್ ವಾರ್ನಿಂಗ್…
- Mysore
- June 22, 2024
- No Comment
- 657
ಮೈಸೂರು,ಜೂ22,Tv10 ಕನ್ನಡ
ಸಿಎಂ ತವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿದೆ.ಈ ಬಗ್ಗೆ ದೂರು ಬಂದ ಹಿನ್ನಲೆ ತಹಸೀಲ್ದಾರ್ ಮಹೇಶ್ ಕುಮಾರ್ ರವರು ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿ ಅಸ್ಪೃಶ್ಯತೆಯ ಪಿಡುಗಿಗೆ ಬಿಸಿ ಮುಟ್ಟಿಸಿದ್ದಾರೆ.ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆ ವರುಣಾದ ಕಿರಾಳು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಬಗ್ಗೆ ದೂರು ಬಂದ ಹಿನ್ನಲೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಮಹೇಶ್ ಕುಮಾರ್ ರವರು ಕಾರ್ಯೋನ್ಮುಖರಾಗಿ ಅಸ್ಪೃಶ್ಯತೆ ಆಚರಣೆಗೆ ಬ್ರೇಕ್ ಹಾಕಿದ್ದಾರೆ.ಈ ಬಗ್ಗೆ ಪರಿಶಿಷ್ಠ ಜಾತಿಗೆ ಸೇರಿದ ನವೀನ್ ಎಂಬುವರು ತಹಸೀಲ್ದಾರ್ ರವರಿಗೆ ದೂರು ನೀಡಿದ್ದರು.ವಿದ್ಯಾವಂತ ನಾಗರೀಕನಾದ ನನಗೆ ಗ್ರಾಮದ ಶಂಭುಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಅರ್ಚಕರು ಹಾಗೂ ಗ್ರಾಮಸ್ಥರು ಅವಕಾಶ ನೀಡದೆ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ಕೂಡಲೇ ಎಚ್ಚೆತ್ತ ತಹಸೀಲ್ದಾರ್ ವರುಣಾ ಠಾಣೆಯ ಪಿ ಎಸ್ಸೈ ಚೇತನ್ ಹಾಗೂ ಇತರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನ ಒಲಿಸಿ ನಿರ್ಭಂಧ ಹೇರಿದ್ದ ನವೀನ್ ರವರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿದರು.ಅಸ್ಪೃಶ್ಯತೆ ಒಳಗಾದ ನವೀನ್ ಅಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಸಭೆ ಕರೆದು ಅಸ್ಪೃಶ್ಯತೆ ಆಚರಿಸದಂತೆ ಜಾಗೃತಿ ಮೂಡಿಸುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ.21 ನೇ ಶತಮಾನಕ್ಕೆ ಕಾಲಿಟ್ಟರೂ ಹೀನ ಪದ್ದತಿ ಜೀವಂತವಾಗಿರುವುದು ಶೋಚನೀಯ.ರಾಕೆಟ್ ಯುಗದಲ್ಲೂ ಇಂತಹ ಪಿಡುಗನ್ನ ಅನುಸರಿಸುತ್ತಿರುವುದು ವಿಷಾಧನೀಯ.ಅದ್ರಲ್ಲೂ ಮೌಢ್ಯಾಚರಣೆ, ಅನಿಷ್ಠ ಪದ್ದತಿಗಳ ವಿರುದ್ದ ಭಾಷಣ ಮಾಡುವ ಸಿಎಂ ತವರಿನಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಹೆಚ್.ಡಿ.ಮಹದೇವಪ್ಪ ನವರ ತಾಲೂಕಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ಮತ್ತಷ್ಟು ಖಂಡನೀಯ.ತಹಸೀಲ್ದಾರ್ ಮಹೇಶ್ ಕುಮಾರ್ ರವರ ಉತ್ತಮ ಕಾರ್ಯಕ್ಕೆ ಉಪತಹಸೀಲ್ದಾರ್ ಲತಾ ಶರಣಮ್ಮ,ಗ್ರಾಮ ಆಡಳಿತಾಧಿಕಾರಿಗಳಾದ ಕೀರ್ತಿಕುಮಾರ್ ಮತ್ತು ಅಬ್ದುಲ್ ರಶೀದ್ ಸಾಥ್ ನೀಡಿದ್ದಾರೆ…