
ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ದ ಗ್ರಾಮಸ್ಥರ ಆಕ್ರೋಷ…ನಮ್ಮ ಜಮೀನಿಗೆ ತಂತಿ ಬೇಲಿ ನಿರ್ಮಿಸಿ ಗೂಂಡಾ ವರ್ತನೆ ಆರೋಪ…ದಯಾಮರಣಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ…
- TV10 Kannada Exclusive
- November 27, 2024
- No Comment
- 200


ಚಾಮರಾಜನಗರ,ನ27,Tv10 ಕನ್ನಡ

ಸರ್ಕಾರ ನೀಡಿದ ಕೃಷಿ ಭೂಮಿಯನ್ನ ಭೋಗ್ಯಕ್ಕೆ ಪಡೆದು ಅಕ್ರಮವಾಗಿ ತಂತಿ ಬೇಲಿ ನಿರ್ಮಿಸಿ ಗೂಂಡಾ ವರ್ತನೆ ಪ್ರದರ್ಶಿಸುತ್ತಿರುವ ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ದ ಗುಂಡ್ಲುಪೇಟೆ ಬೇಗೂರು ಹೋಬಳಿಯ ಪಿ.ಸಿ.ವರ್ಗೀಸ್
ಕಾಲೋನಿ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.ರಿಯಲ್ ಎಸ್ಟೇಟ್ ದಂಧೆಕೋರರ ಕಪಿಮುಷ್ಠಿಯಲ್ಲಿರುವ ನಮ್ಮ ಜಮೀನುಗಳನ್ನ ಬಿಡಿಸಿಕೊಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಬಿನಿ,ನುಗು,ತಾರಕ ಜಲಾಶಯಗಳ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಕೆಲಸಗಾರರ ಶ್ರಮಕ್ಕೆ ಪ್ರತಿಫಲವಾಗಿ ಸರ್ಕಾರ 1983-84 ರ ಸಾಲಿನಲ್ಲಿ ಪಿ.ಸಿ.ವರ್ಗೀಸ್ ಕಾಲೋನಿ ನಿರ್ಮಿಸಿ 53 ಕುಟುಂಬಗಳಿಗೆ ನಿವೇಶನ ನೀಡಿ ಮನೆಗಳನ್ನ ನಿರ್ಮಿಸಿಕೊಟ್ಟು ಜೀವನೋಪಾಯಕ್ಕಾಗಿ ಪ್ರತಿಕುಟುಂಬಕ್ಕೆ ತಲಾ 3.20 ಎಕ್ರೆ ಜಮೀನು ಮಂಜೂರು ಮಾಡಿಕೊಟ್ಟಿದೆ.ಊಟಿ ಮೂಲದ ರಿಯಲ್ ಎಸ್ಟೇಟ್ ವ್ಯಾಪಾರಿ ಸುಂದರ್ ಎಂಬಾತ ಶುಂಠಿ ಬೆಳೆ ಬೆಳೆಯಲು ಕೃಷಿ ಭೂಮಿಯನ್ನ ಭೋಗ್ಯಕ್ಕೆ ಪಡೆದಿದ್ದಾನೆ.ನಂತರದ ದಿನಗಳಲ್ಲಿ ಭೋಗ್ಯಕ್ಕೆ ಪಡೆದ ಕೃಷಿ ಭೂಮಿಗೆ ಅಕ್ರಮವಾಗಿ ತಂತಿ ಬೇಲಿಗಳನ್ನ ನಿರ್ಮಿಸಿ ಗ್ರಾಮಸ್ಥರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದಾನೆ.ನಮ್ಮ ಅನುಮತಿ ಪಡೆಯದೆ ತಂತಿಬೇಲಿಗಳನ್ನ ನಿರ್ಮಿಸಿ ಕಾಲೋನಿಗೆ ನುಗ್ಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಾನೆ.ಸುಂದರ್ ಗೆ ಪೆಚ್ಚಿಯಮ್ಮಾಳ್,ಲಿಂಗಯ್ಯ,ಹಳ್ಳದಮಾದಹಳ್ಳಿ ಕೃಷ್ಣ ಎಂಬುವರು ಸಾಥ್ ನೀಡಿದ್ದಾರೆ.ಇವರ ವಿರುದ್ದ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಹೀಗಾಗಿ ರಿಯಲ್ ಎಸ್ಟೇಟ್ ದಂಧೆಕೋರರ ಕಪಿಮುಷ್ಠಿಯಲ್ಲಿರುವ ಜಮೀನುಗಳನ್ನ ಬಿಡಿಸಿಕೊಡಿ ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡಿ ಎಂದು ಪತ್ರ ಬರೆದು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ…